ಸರಕಾರದ ವರ್ತನೆ ಚವಾಣ್ ಸಮರ್ಥನೆ
ನವದೆಹಲಿ, ನ. 12– ನೌಕರರು ಮುಷ್ಕರ ಹೂಡುವ ತತ್ವವನ್ನು ಸರ್ಕಾರ ಎಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಚವಾಣ್ ಇಂದು ಲೋಕಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು.
ಕೇಂದ್ರ ನೌಕರರ ಇತ್ತೀಚಿನ ಮುಷ್ಕರ ಬಗ್ಗೆ ಸರ್ಕಾರ ವರ್ತಿಸಿದ ರೀತಿಯನ್ನು ಸಮರ್ಥಿಸಿಕೊಳ್ಳುತ್ತ, ಸರ್ಕಾರಿ ನೌಕರರು ಮುಷ್ಕರದ ವಿಚಾರವನ್ನೇ ಸಂಪೂರ್ಣ ತೊರೆಯಬೇಕು ಎಂದು ಖಂಡಿತವಾದ ಧ್ವನಿಯಲ್ಲಿ ಚವಾಣ್ ಘೋಷಿಸಿದರು.
ಪಿ.ಎಫ್. ಸಾಲಗಳಿಗೆಅಗ್ಗದ ಬಡ್ಡಿ: ಮೀಸಲು ನಿಧಿ
ಮದ್ರಾಸ್, ನ. 12– ಪ್ರಾವಿಡೆಂಟ್ ಫಂಡಿನಿಂದ ಸಾಲಕೊಟ್ಟು ಅನ್ಯಾಯವಾದ ದರದಲ್ಲಿ ಬಡ್ಡಿ ವಸೂಲು ಮಾಡುವವರಿಂದ ಕೆಲಸಗಾರರನ್ನು ರಕ್ಷಿಸಲು ಪ್ರಾವಿಡೆಂಟ್ ಫಂಡ್ ಧರ್ಮದರ್ಶಿಗಳ ಮಂಡಲಿಯಲ್ಲಿರುವ ಮಾಲೀಕರ ಮತ್ತು ಕೆಲಸಗಾರರ ಪ್ರತಿನಿಧಿಗಳು ಆಲೋಚಿಸುತ್ತಿದ್ದಾರೆ.
ಕ್ರಾಂತಿಕಾರಿಗಳಲ್ಲ
ನವದೆಹಲಿ, ನ. 12– ಭಾರತದಲ್ಲಿ ಚುನಾವಣೆ ಕಣದಲ್ಲಾಗಲೀ ಬೀದಿಯಲ್ಲಾಗಲೀ ಕ್ರಾಂತಿ ನಡೆಯದು ಎಂದು ಆಚಾರ್ಯ ಕೃಪಲಾನಿ ಇಂದು ಲೋಕಸಭೆಯಲ್ಲಿ ತಿಳಿಸಿದರು.
ಸೆಪ್ಟೆಂಬರ್ 19ರ ಸಾಂಕೇತಿಕ ಮುಷ್ಕರ ಕ್ರಾಂತಿಯ ಪೂರ್ವಭಾವಿ ಕಸರತ್ತು ಎಂದು ಕೆಲವರು ಹೇಳುವುದನ್ನು ಕೃಪಲಾನಿ ಒಪ್ಪುವುದಿಲ್ಲ. ಸೈನಿಕರು ಬಂಡಾಯವೆದ್ದರೆ ಮಾತ್ರ ಕ್ರಾಂತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕುದುರೆಮುಖ ಅದುರು ಅಭಿವೃದ್ಧಿ ಯೋಜನೆಗೆ ಒಟ್ಟಾರೆ ಒಪ್ಪಿಗೆ?
ಬೆಂಗಳೂರು, ನ. 12– ತಜ್ಞರ ತಂಡದೊಂದಿಗೆ ಕುದುರೆಮುಖ ಕಬ್ಬಿಣದ ಅದುರಿನ ನಿಕ್ಷೇಪ ಹಾಗೂ ಅಲ್ಲಿಂದ 40 ಮೈಲಿಗಳ ದೂರವಿರುವ ಮಂಗಳೂರು ಸರ್ವಋತು ಬಂದರು ನಿವೇಶನವನ್ನು ವಿಮಾನದಲ್ಲಿ ಸಮೀಕ್ಷೆ ನಡೆಸಿದ ಜಪಾನಿನ ಉಕ್ಕು ಉದ್ಯಮದ ನಾಯಕ ಶ್ರೀ ಷಿಗಿಯೋ ನಗಾನೋ ಅವರು, ಅಂತಿಮವಾಗಿ ಸುಮಾರು ನೂರು ಕೋಟಿ ರೂಪಾಯಿಗಳ ವೆಚ್ಚ ಬರುವ ಅದುರು ಅಭಿವೃದ್ಧಿ ಯೋಜನೆಯನ್ನು ಒಟ್ಟಿನಲ್ಲಿ ಒಪ್ಪಿಕೊಂಡಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.