ರಾಜಧನ ರದ್ದು ನಿರ್ಧಾರ ಬದಲಿಸಲು ಪ್ರಧಾನಿಗೆ ಕೇಂದ್ರ ಸಚಿವರಿಬ್ಬರ ಪತ್ರ
ನವದೆಹಲಿ, ಫೆ. 6–ಮಾಜಿ ರಾಜರುಗಳಿಗೆ ನೀಡಲಾಗುತ್ತಿರುವ ರಾಜಧನವನ್ನು ರದ್ದುಪಡಿಸದಿರುವಂತೆ ಸೂಚಿಸಿ ಕೇಂದ್ರ ಸಂಪುಟದ ಇಬ್ಬರು ಹಿರಿಯ ಸಚಿವರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆಂದು ಗೊತ್ತಾಗಿದೆ.
ರಾಜ್ಯ ಲಾಟರಿ ಟಿಕೆಟ್ಗೆ ವಿಪರೀತ ಗಿರಾಕಿ: ಹೊಸ ಶ್ರೇಣಿಯಲ್ಲಿ ಬಿಡುಗಡೆ
ಬೆಂಗಳೂರು, ಫೆ. 6–ಫೆಬ್ರುವರಿ ತಿಂಗಳ ರಾಜ್ಯ ಲಾಟರಿಯ ‘ಇ’ ಮತ್ತು ‘ಎಫ್’ ಎರಡು ಶ್ರೇಣಿಗಳ ಟಿಕೆಟ್ಗಳೆಲ್ಲವೂ ಮಾರಾಟವಾಗಿರುವ ಕಾರಣ, ಸರ್ಕಾರ ‘ಜಿ’ ಮೂರನೇ ಶ್ರೇಣಿಯ ಟಿಕೆಟ್ಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ. ಪ್ರತಿಶ್ರೇಣಿಯಲ್ಲೂ ತಲಾ 1 ರೂಪಾಯಿಯ 25 ಲಕ್ಷ ಟಿಕೆಟ್ಗಳಿರುತ್ತವೆ. ಈ ಮೂರು ಶ್ರೇಣಿಗಳ ‘ಡ್ರಾ’ ಫೆಬ್ರುವರಿ 25ರಂದು. ಟಿಕೆಟ್ಟುಗಳಿ ಗಾಗಿ ಸಬ್ ಏಜೆಂಟರುಗಳಿಂದ ವಿಪರೀತ ಬೇಡಿಕೆ ಬರುತ್ತಿದ್ದು ಲಾಟರಿ ಜನಪ್ರಿಯಗೊಳ್ಳುತ್ತಿರುವುದರಿಂದ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡಬೇಕಾಯಿತೆಂದು ಲಾಟರಿ ಯೋಜನೆ ಅಧ್ಯಕ್ಷ ಶ್ರೀ ಕೆ. ನಾರಾಯಣಸ್ವಾಮಿ ಅವರು ಇಂದು ಪತ್ರಿಕಾ ಪ್ರತಿನಿಧಿಗಳಿಗೆ ತಿಳಿಸಿ, ಟಿಕೆಟ್ಗಳು ಬ್ಯಾಂಕುಗಳ ಮೂಲಕ ಸೋಮವಾರ ಮಾರುಕಟ್ಟೆಗೆ ಬರಲಿವೆ ಎಂದರು.
ಪ್ರಾದೇಶಿಕ ಏಕತೆಗಾಗಿ ಉಪವಾಸ ಸತ್ಯಾಗ್ರಹ
ಅಮೃತಸರ, ಫೆ. 6–ದೇಶವನ್ನು ನಾಲ್ಕು ವಲಯಗಳಾಗಿ ವಿಂಗಡಿಸಬೇಕೆಂದು ಒತ್ತಾಯಪಡಿಸಲು ಅಖಿಲ ಭಾರತೀಯ ಏಕತಾ ಸಭಾ ಸಂಚಾಲಕರು 20ರಂದು ಪ್ರಧಾನಿ ನಿವಾಸದ ಮುಂದೆ ಅನಿರ್ದಿಷ್ಟ ಉಪವಾಸ ಮುಷ್ಕರ ಹೂಡುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.