ವೀರಪ್ಪನ್ ಗಡುವು ಅಂತ್ಯ, ಮಾತುಕತೆಗೆ ಆಸಕ್ತಿ
ಈರೋಡ್, ನ. 9 (ಯುಎನ್ಐ, ಪಿಟಿಐ)– ಈ ತಿಂಗಳ ಒಂದರಂದು ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಯನ್ನು ಕುಖ್ಯಾತ ದಂತಚೋರ ವೀರಪ್ಪನ್ ಅಪಹರಿಸಿದ ಬಳಿಕ ಇದೇ ಮೊದಲ ಬಾರಿ ನಾಳೆ ರಾತ್ರಿ ಜಿಲ್ಲಾಧಿಕಾರಿ ಎನ್.ಪಳನಿಯಪ್ಪನ್, ವೀರಪ್ಪನ್ನ ಪ್ರತಿನಿಧಿಯ ಜತೆ ಅಂತಿಯೂರ್ ಅರಣ್ಯ ಅತಿಥಿಗೃಹದಲ್ಲಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ಕಳೆದ ರಾತ್ರಿ ಜಿಲ್ಲಾಧಿಕಾರಿ ಅವರಿಗೆ ವೀರಪ್ಪನ್ ಕಳುಹಿಸಿದ ಸಂದೇಶದಲ್ಲಿ ತನ್ನ ಪ್ರತಿನಿಧಿಯನ್ನು ವರಡು ಪಲ್ಲಮ್ಗೆ ನಾಳೆ ಸಂಜೆ 5 ಗಂಟೆಗೆ ಕಳುಹಿಸುವುದಾಗಿ ತಿಳಿಸಿದ್ದಾನೆ. ತನ್ನ ಪ್ರತಿನಿಧಿಗೆ ತೊಂದರೆ ಉಂಟು ಮಾಡಿದಲ್ಲಿ ಮೂವರು ಒತ್ತೆಯಾಳುಗಳನ್ನು ಗುಂಡಿಕ್ಕಿ ಕೊಲ್ಲುವುದಾಗಿ ಎಚ್ಚರಿಸಿದ್ದಾನೆ.
ರಾಜ್ಯದ ಆಸ್ಪತ್ರೆ ಸುಧಾರಣೆ ಕಾರ್ಯ ಮಾರ್ಚ್ನಿಂದ
ಬೆಂಗಳೂರು, ನ. 9– ಸರ್ಕಾರಿ ಆಸ್ಪತ್ರೆಗಳ ಸುಧಾರಣೆಗಾಗಿ ರೂಪಿಸಿರುವ 546 ಕೋಟಿ ರೂಪಾಯಿ ವೆಚ್ಚದ ವಿಶ್ವ ಬ್ಯಾಂಕ್ ನೆರವಿನ ಯೋಜನೆ ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್ನಿಂದ ಕಾರ್ಯಾರಂಭವಾಗಲಿದೆ ಎಂದು ವಾರ್ತಾ ಸಚಿವ ಎಂ.ಸಿ. ನಾಣಯ್ಯ ಅವರು ಇಂದು ಇಲ್ಲಿ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಈ ಯೋಜನೆ ರೂಪಿಸಲಾಗಿದೆ. ಇಲ್ಲಿ ಉಚಿತ ಚಿಕಿತ್ಸೆ ಪಡೆಯಲು ಅರ್ಹರಿಗೆ ಹಸಿರು ಕಾರ್ಡ್ ನೀಡಲಾಗುವುದು. ಚಿಕಿತ್ಸೆ ಪಡೆಯುವ ಇತರರಿಗೆ ಕನಿಷ್ಠ ದರ ವಿಧಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ವಿವರ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.