ವಸತಿಗೆ ಪ್ರತ್ಯೇಕ ಖಾತೆ ದೇವೇಗೌಡ ಪ್ರಕಟಣೆ
ಬೆಂಗಳೂರು, ನ. 19– ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ವಸತಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ನಗರಾಭಿವೃದ್ಧಿ ಇಲಾಖೆಯಿಂದ ವಸತಿ ಖಾತೆಯನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ವಸತಿ ಇಲಾಖೆ ರಚಿಸಲು ಸರ್ಕಾರ ಉದ್ದೇಶಿಸಿದೆ.
ಎಲ್ಲ ವಸತಿ ಯೋಜನೆಗಳನ್ನು ಒಂದೇ ಇಲಾಖೆ ವ್ಯಾಪ್ತಿಯಲ್ಲಿ ತರುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ. ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಈ ವಿಷಯವನ್ನು ಪ್ರಕಟಿಸಿದರು.
ಸಸ್ಯರಾಶಿ ನಲುಗಿಸಿ ಪರಿಸರ ರಕ್ಷಣೆ!
ಬೆಂಗಳೂರು, ನ. 19– ನಗರದ ಸೌಂದರ್ಯ ಉಳಿಸಿ ಪರಿಸರವನ್ನು ಸ್ವಚ್ಛವಾಗಿ ಉಳಿಸಿಕೊಳ್ಳಲು ರೂಪಿಸಿದ ಯಂಗ್ ಇಂಡಿಯಾದವರ ‘ಬೆಂಗಳೂರು ಉಳಿಸಿ’ ಆಂದೋಲನಕ್ಕಾಗಿ ಕಬ್ಬನ್ ಪಾರ್ಕಿನ ಶೇಷಾದ್ರಿ ಅಯ್ಯರ್ ಸ್ಮಾರಕ ಭವನದ ಮುಂದೆ ಹಸಿರಿನ ನಡುವೆ ಶಾಮಿಯಾನ ನಿರ್ಮಿಸಿ, ಹುಲ್ಲುಹಾಸಿನ ಮೇಲೆಲ್ಲಾ ‘ಗಾಯದ ಗುರುತು’ಗಳನ್ನು ಮಾಡಲಾಗಿತ್ತು.
ಸೌಂದರ್ಯ ರಾಣಿ ಮಾಜಿ ವಿಶ್ವ ಸುಂದರಿ ಸುಶ್ಮಿತಾರನ್ನು ಕಾಣುವ ಭರದಲ್ಲಿ ಹಿರಿಯರು ಕಿರಿಯರೆನ್ನದೆ ಎಲ್ಲರೂ ಸೇರಿ ನಗುವ ಹೂಗಿಡಗಳನ್ನು ತುಳಿದು ನಲುಗಿಸಿದ್ದರು. ಹಸಿರು ಹುಲ್ಲುಗಾವಲಿನ ಮೇಲೆ ಕಂಡಲ್ಲಿ ಕಾಗದ, ಪ್ಲಾಸ್ಟಿಕ್, ಐಸ್ಕ್ರೀಂ ಕಡ್ಡಿಗಳು, ಒಡೆದ ಹೂ ಕುಂಡಗಳ ಅವಶೇಷಗಳು, ನಲುಗಿದ ಗಿಡಬಳ್ಳಿಗಳು ಸೌಂದರ್ಯ ಉಳಿಸುವ ಈ ಕಾರ್ಯಕ್ರಮಕ್ಕೆ ಮೂಕ ಸಾಕ್ಷಿಯಂತೆ ನಿಂತಿದ್ದವು. ಕಾರ್ಯಕ್ರಮದ ನಂತರ ಇಡೀ ಪ್ರದೇಶ ಆನೆಯ ಹಾವಳಿಗೆ ಸಿಕ್ಕಿದ ಕಬ್ಬಿನ ತೋಟದಂತಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.