ಕಾಶ್ಮೀರ ನಿರ್ಣಯ: ಪಾಕ್ಗೆ ಹಿನ್ನಡೆ
ಜಿನೀವಾ, ಮಾ. 1 (ಯುಎನ್ಐ)– ಪಾಕಿಸ್ತಾನದ ಸರ್ಕಾರೇತರ ಸಂಘಟನೆಗಳು (ಎನ್ಜಿಓ) ತಮ್ಮ ಹೇಳಿಕೆಯಲ್ಲಿನ ಜಮ್ಮು–ಕಾಶ್ಮೀರ ಪ್ರಸ್ತಾಪವನ್ನು ಕೈಬಿಡುವಂತೆ ವಿಶ್ವ ಸಂಸ್ಥೆ ಮಾನವ ಹಕ್ಕು ಆಯೋಗವು ಸೂಚನೆ ನೀಡಿರುವುದರಿಂದ ಪಾಕಿಸ್ತಾನಕ್ಕೆ ಮತ್ತಷ್ಟು ಹಿನ್ನಡೆ ಉಂಟಾಗಿದೆ.
ನಿನ್ನೆ ರಾತ್ರಿ ಮುಂದುವರಿದ ಚರ್ಚಾ ಕಾಲಕ್ಕೆ ವಿಶ್ವ ಸಂಸ್ಥೆಯ ಮಾನವ ಹಕ್ಕು ಆಯೋಗದ ಅಧ್ಯಕ್ಷರು ಈ ಬಗ್ಗೆ ಭಾರತ ಮಾಡಿದ ಆಕ್ಷೇಪವನ್ನು ಎತ್ತಿ ಹಿಡಿದು ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ತೆಗೆದು ಹಾಕುವಂತೆ ಸೂಚಿಸಿದರು. ಆಯೋಗದ ಸೂಚನೆ ಮೇರೆಗೆ ಎನ್ಜಿಓ ಕಾಶ್ಮೀರ ವಿಚಾರವನ್ನು ಕೈಬಿಟ್ಟಿತು.
ಇದರಿಂದಾಗಿ ಎನ್ಜಿಓ ಹೇಳಿಕೆಯ ಸತ್ವವೇ ಇಂಗಿದಂತಾಗಿದೆ ಎಂದು ವಿಶ್ವ ಸಂಸ್ಥೆ ಮಾನವ ಹಕ್ಕು ಆಯೋಗದ ಮೂಲಗಳು ತಿಳಿಸಿದವು. ಈ ಬೆಳವಣಿಗೆ ಪಾಕಿಸ್ತಾನದ ಅಧಿಕೃತ ನಿರ್ಣಯಕ್ಕೆ ಮತ್ತಷ್ಟು ಹಿನ್ನಡೆ ಉಂಟು ಮಾಡಿದೆ.
ಮನಮೋಹನ್ ದೇಸಾಯಿ ನಿಧನ
ಮುಂಬೈ, ಮಾ. 1 (ಪಿಟಿಐ)– ‘ಅಮರ್ ಅಕ್ಬರ್ ಆಂಟನಿ’ಯಂತಹ ಜನಪ್ರಿಯ ಹಿಂದಿ ಚಿತ್ರಗಳನ್ನು ನಿರ್ಮಿಸಿದಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಮನಮೋಹನ್ ದೇಸಾಯಿ ಇಂದು ಮಧ್ಯಾಹ್ನ ತಮ್ಮ ನಿವಾಸದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದರು. ದೇಸಾಯಿ ಅವರ ನಿಧನ ಸುದ್ದಿ ತಿಳಿಯುತ್ತಲೇ ಹಿಂದಿ ಚಲನಚಿತ್ರರಂಗದ ಗಣ್ಯರುಮಧ್ಯ ಮುಂಬೈನ ಖೆಟ್ವಾಡಿಯಲ್ಲಿ ಇರುವ ಅವರ ನಿವಾಸ ‘ಜೀವನ್ ಸಂಕೀರ್ಣ’ಕ್ಕೆ ಧಾವಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.