ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, 25–7–1995

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST

ಒತ್ತೆಯಾಳುಗಳ ಬದಲು ಬಂಧಿತ ಉಗ್ರಗಾಮಿಗಳ ಬಿಡುಗಡೆಗೆ ನಕಾರ

ನವದೆಹಲಿ, ಜುಲೈ 24 (ಪಿಟಿಐ)– ಕಾಶ್ಮೀರ ಕಣಿವೆಯಲ್ಲಿ ಅಲ್‌ ಫರಾನ್ ಉಗ್ರಗಾಮಿಗಳು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಐವರು ವಿದೇಶಿ ಪ್ರವಾಸಿಗರ ಬಿಡುಗಡೆಗೆ ಬದಲಾಗಿ ಯಾವುದೇ ಉಗ್ರಗಾಮಿಗಳನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಇಂದು ಹೇಳಿದೆ.

ವಿದೇಶಿ ಪ್ರವಾಸಿಗರನ್ನು ಉಗ್ರಗಾಮಿಗಳ ಕೈಯಿಂದ ರಕ್ಷಿಸಲು ಸರ್ವ ಪ್ರಯತ್ನ ಸಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಉಗ್ರಗಾಮಿಗಳ ಬಿಡುಗಡೆ ಮಾತ್ರ ಸಾಧ್ಯವಿಲ್ಲ. ಈ ಸಂಬಂಧ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಎಂದು ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿ ಕೆ.ಪದ್ಮನಾಭಯ್ಯ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಪೊಲೀಸ್‌ ಅಧಿಕಾರಿಗಳಿಗೆ ಪೇಜರ್‌

ಬೆಂಗಳೂರು, ಜುಲೈ 24– ಪೊಲೀಸ್‌ ಇಲಾಖೆಯ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುವ್ಯವಸ್ಥಿತಗೊಳಿಸಲು ಡಿಸಿಪಿ ಹಾಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಒಟ್ಟು 50 ಪೇಜರ್‌ ಉಪಕರಣಗಳನ್ನು ನೀಡಲಾಗಿದೆ. ಇನ್ನು ಮುಂದೆ ಪೊಲೀಸರು ತಮಗೆ ಸರಿಯಾದ ಸಂದರ್ಭದಲ್ಲಿ ಸಂದೇಶಗಳು ದೊರಕಲಿಲ್ಲ ಎಂದು ಗೊಣಗುವಂತಿಲ್ಲ ಹಾಗೂ ನೆವ ಹೇಳುವಂತಿಲ್ಲ.

ಸಂಪರ್ಕ ವ್ಯವಸ್ಥೆಯನ್ನು ಉತ್ತಮಗೊಳಿಸುವ ಮೊದಲ ಹಂತವಾಗಿ ಕೇವಲ ಹಿರಿಯ ಅಧಿಕಾರಿಗಳಿಗೆ ಈ ಉಪಕರಣವನ್ನು ನೀಡಲಾಗಿದ್ದು, ಇದರಿಂದ ಪೊಲೀಸ್‌ ಅಧಿಕಾರಿಗಳು ತಮ್ಮ ನಡುವೆಸಮನ್ವಯ ಸಾಧಿಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ, ವೈರ್‌ಲೆಸ್‌ನಂಥ ಉಪಕರಣಕ್ಕಿಂತ ಇದು ಹಗುರವಾಗಿದ್ದು, ಅಧಿಕಾರಿಗಳು ಸುಲಭವಾಗಿ ಹಿಡಿದುಕೊಂಡು ತಿರುಗಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.