ADVERTISEMENT

ಗುರುವಾರ 23–6–1994

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
   

ದಳ ಒಡಕಿಗೆ ನಾಯಕತ್ವ ವೈಫಲ್ಯವೇ ಕಾರಣ

ಬೆಂಗಳೂರು, ಜೂನ್ 22– ರಾಷ್ಟ್ರೀಯ ಮಟ್ಟದಲ್ಲಿ ಜನತಾ ದಳ ಇಬ್ಭಾಗವಾಗಲು ಪಕ್ಷದ ನಾಯಕ‌ತ್ವವೇ ಕಾರಣ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಜನತಾ ದಳದ ಮುಖಂಡರು ಕರ್ನಾಟಕದಲ್ಲಿ ಪಕ್ಷ ಒಡಕು ಇಲ್ಲದೆ ಅಖಂಡವಾಗಿದೆ ಎಂದು ಇಲ್ಲಿ ಒಕ್ಕೊರಲಿನಿಂದ ಸಾರಿ ಹೇಳಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಸಂಸದೀಯ ಮಂಡಲಿ ಅಧ್ಯಕ್ಷ ಜೆ.ಎಚ್. ಪಟೇಲ್ ಹಾಗೂ ಸಿದ್ಧರಾಮಯ್ಯ ಅವರು ನಡೆಸಿದ ಜಂಟಿ‍ ಪ‍ತ್ರಿಕಾಗೋಷ್ಠಿಯಲ್ಲಿ ರಾಜ್ಯ ಘಟಕದಲ್ಲಿ ಒಡಕಿಲ್ಲ ಎಂಬುದನ್ನು ಸ್ವಷ್ಟಪಡಿಸಿದರು.

ADVERTISEMENT

ಚಲನಚಿತ್ರ ದಿಗ್ಗಜ ಪ್ರಸಾದ್ ನಿಧನ

ಮದ್ರಾಸ್, ಜೂನ್ 23 (ಯುಎನ್‌ಐ)– ಭಾರತೀಯ ಚಲನಚಿತ್ರ ಉದ್ಯಮದ ದಿಗ್ಗಜ ಹಾಗೂ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಎಲ್.ವಿ. ಪ್ರಸಾದ್ ಇಂದು ಇಲ್ಲಿ ನಿಧನರಾದರು.

ಅವರಿಗೆ 87 ವರ್ಷ ವಯಸ್ಸಾಗಿತ್ತು. ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಬಹಳ ದಿನಗಳಿಂದ ಅಸ್ವಸ್ಥರಾಗಿದ್ದ ಅವರು, ಕೆಲವು ದಿನಗಳಿಂದ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಸಂಜೆ ಈ ಆಸ್ಪತ್ರೆಯಲ್ಲಿಯೇ ಅವರು ಕೊನೆಯುಸಿರೆಳೆದರು.

ನೆಲದಡಿಯಲ್ಲಿ 40 ದಿನ

ಬೀಜಿಂಗ್, ಜೂನ್ 22 (ರಾಯಿಟರ್)– ಚೀನದ ನೈರುತ್ಯ ಪ್ರಾಂತ್ಯದಲ್ಲಿ ಕಳೆದ ಏಪ್ರಿಲ್ 30 ರಂದು ಭೂಕುಸಿತ ಸಂಭವಿಸಿ
ದಾಗ ಮಣ್ಣಿನ ಅಡಿ ಸೇರಿದ್ದ 20 ವರ್ಷದ ಯುವಕನೊಬ್ಬನನ್ನು 40 ದಿನಗಳ ನಂತರ ಜೀವಂತ ಹೊರ ತೆಗೆಯಲಾಗಿದೆ.

ಜೆಂಗ್ ಮಂಗ್ ಎಂಬ ಈ ಯುವಕ ರಸ್ತೆ ಕೆಲಸ ಮಾಡುತ್ತಿದ್ದಾಗ ಭೂ ಕುಸಿತ ಸಂಭವಿಸಿ ಮಣ್ಣಿನ ಅಡಿ ಹೂತು ಹೋಗಿದ್ದ, ಹಾಗೆಯೇ ತೆವಳಿ ಗುಹೆಯೊಂದರಲ್ಲಿ ಸೇರಿದ. ಈತನನ್ನು ನಂತರ ಪತ್ತೆ ಹಚ್ಚಿ ಹೊರ ತೆಗೆಯಲಾಯಿತು. ಹೊರ ಬರುವಾಗ ಈತನ ತೂಕ 30 ಕೆ.ಜೆ.ಗೆ ಇಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.