ಉತ್ತರ ಪ್ರದೇಶ ಬಂದ್ ಹಿಂಸಾತ್ಮಕ: 4 ಸಾವು
ಲಖನೌ, ಸೆ. 13 (ಯುಎನ್ಐ, ಪಿಟಿಐ)– ರಾಜ್ಯದ ಮೀಸಲು ನೀತಿಯನ್ನು ಬೆಂಬಲಿಸಿ ಆಡಳಿತಾರೂಢ ಸಮಾಜವಾದಿ ಪಕ್ಷ– ಬಹುಜನ ಸಮಾಜ ಪಕ್ಷ ನೀಡಿದ ಬಂದ್ ಕರೆಯನ್ವಯ ಉತ್ತರ ಪ್ರದೇಶದಲ್ಲಿ ಇಂದು ಮೀಸಲಾತಿ ಪರ ಮತ್ತು ವಿರೋಧಿ ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ನಾಲ್ವರು ಸತ್ತು 250ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ರಾಜ್ಯದಾದ್ಯಂತ ಬಂದ್ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಿಂಸಾಚಾರಕ್ಕೆ ಒಳಗಾದ ಫಿರೋಜಾಬಾದ್ ಪ್ರದೇಶದಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ.
ಮೈಸೂರಿನಲ್ಲಿ ನಾಡಬಾಂಬ್ ಸ್ಫೋಟ: ಕಟ್ಟಡ ಧ್ವಂಸ
ಮೈಸೂರು, ಸೆ. 13– ಮಂಗಳವಾರ ಬೆಳಗಿನ ಜಾವ ಶಕ್ತಿಯುತ ನಾಡಬಾಂಬ್ ಸ್ಫೋಟಿಸಿದ ಕಾರಣ ನಗರದ ಸಾಡೆ ರಸ್ತೆಯಲ್ಲಿ ಪುರಾತನ ಕಟ್ಟಡವೊಂದು ಧ್ವಂಸವಾಯಿತು.
ಈ ಸ್ಫೋಟದಿಂದ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿರುವುದನ್ನು ಬಿಟ್ಟರೆ ಪ್ರಾಣಹಾನಿ ಸಂಭವಿಸಿಲ್ಲ. ಸ್ಫೋಟಗೊಂಡ ಸಮಯದಲ್ಲಿ ಈ ಕಟ್ಟಡದ ಮೇಲಟ್ಟಣಿಗೆಯಲ್ಲಿ ಒಂಬತ್ತು ಜನ ಬೀಡಿ ಕಾರ್ಮಿಕರು ಮಲಗಿದ್ದರು. ಉಳಿದವರೆಲ್ಲ ಸುರಕ್ಷಿತವಾಗಿದ್ದಾರೆ. ಕಟ್ಟಡ ಕುಸಿದ ಜಾಗದಲ್ಲಿ ಮಲಗಿದ್ದ ವ್ಯಕ್ತಿ ಮಾತ್ರ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ.
ಕರ್ನಾಟಕ ಮುಖ್ಯ ನ್ಯಾಯಾಧೀಶರಾಗಿ ಗಿರೀಶ್ ನಾನಾವತಿ
ನವದೆಹಲಿ, ಸೆ. 13– ಒರಿಸ್ಸಾದ ಮುಖ್ಯ ನ್ಯಾಯಾಧೀಶ ಗಿರೀಶ್ ಡಿ. ನಾನಾವತಿ ಅವರನ್ನು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಾಮೂರ್ತಿಯನ್ನಾಗಿ ನೇಮಿಸಿ ರಾಷ್ಟ್ರಪತಿ ಭವನ ಇಂದು ಪ್ರಕಟಣೆ ಹೊರಡಿಸಿದೆ.
ಅವರು ಸೆ. 28ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.