ವಾಜಪೇಯಿ ಅಂತಿಮ ಯತ್ನ, ಬಿಕ್ಕಟ್ಟು ಪರಿಹಾರ ಸಂಭವ
ಅಹಮದಾಬಾದ್, ಅ. 6 (ಪಿಟಿಐ)– ಗುಜರಾತ್ ವಿಧಾನಸಭೆಯಲ್ಲಿ ಶನಿವಾರ ಬಿಜೆಪಿ ನೇತೃತ್ವದ ಸರ್ಕಾರ ವಿಶ್ವಾಸಮತ ಕೇಳಲಿರುವ ಹಿನ್ನೆಲೆಯಲ್ಲಿ, ಬಿಕ್ಕಟ್ಟು ಪರಿಹಾರಕ್ಕೆ ಭಾರೀ ಯತ್ನ ನಡೆಯುತ್ತಿದೆ. ಈಗಾಗಲೇ ರಾಜಿ ಸೂತ್ರವೊಂದನ್ನು ಕಂಡುಹಿಡಿಯಲಾಗಿದೆ ಎಂದು ಬಲವಾದ ವದಂತಿ ಹಬ್ಬಿದೆ. ಆದರೆ ಭಿನ್ನಮತೀಯ ನಾಯಕ ಶಂಕರಸಿನ್ಹ ವಘೇಲಾ ಅವರು ಈ ವದಂತಿಯನ್ನು ತಳ್ಳಿಹಾಕಿದ್ದಾರೆ.
ಆರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕೇಶುಭಾಯಿ ಪಟೇಲ್ ನೇತೃತ್ವದ ಸರ್ಕಾರವನ್ನು ಪಾರು ಮಾಡುವ ಸಲುವಾಗಿ ಕೊನೇ ಯತ್ನ ಮಾಡಲು ಇಲ್ಲಿಗೆ ಆಗಮಿಸಿರುವ ವಾಜಪೇಯಿ ಅವರನ್ನು ಇಂದು ರಾತ್ರಿ ಸಂಪರ್ಕಿಸಿದಾಗ ‘ಈವರೆಗೆ ಯಾವುದೇ ರಾಜಿ ಸೂತ್ರಕ್ಕೆ ಒಪ್ಪಲಾಗಿಲ್ಲ. ಮಾತುಕತೆ ಮುಂದುವರಿದಿದೆ’ ಎಂದು ಹೇಳಿದರು.
ಬೆಂಗಳೂರು ವಿದ್ಯುತ್ ಖಾಸಗೀಕರಣ
ಬೆಂಗಳೂರು, ಅ. 6– ಕಲ್ಕತ್ತ, ಮುಂಬೈ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗಿಯವರಿಗೆ ವಹಿಸಲು ಉದ್ದೇಶಿಸಿದ್ದು, ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ
ಎಚ್.ಡಿ.ದೇವೇಗೌಡ ಇಂದು ಇಲ್ಲಿ ಪ್ರಕಟಿಸಿದರು.
‘ಬೆಂಗಳೂರಿನಲ್ಲಿ ವಿದ್ಯುತ್ ವಿತರಣೆ ದೊಡ್ಡ ತಲೆನೋವಾಗಿ ಹೋಗಿದೆ. ಈ ವಿಚಾರದಲ್ಲಿ ಗೌಡ ಹತ್ತು ಸಾವಿರ ಕೋಟಿ ರೂಪಾಯಿ ಹೊಡೆದ ಎಂದು ಬೇಕಾದರೆ ಯಾರಾದರೂ ಹೇಳಿಕೊಳ್ಳಲಿ. ನಾನು ಅದಕ್ಕೆ ಅಂಜುವುದಿಲ್ಲ. ಆದರೆ ನಗರ ವಿದ್ಯುತ್ ವಿತರಣೆ ಖಾಸಗೀಕರಣ ಖಚಿತ’ ಎಂದು ಅವರು ಘೋಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.