ಸಂಧಾನ– ನಾಯಕರಿಗೆಬೊಮ್ಮಾಯಿ ಆಹ್ವಾನ
ನವದೆಹಲಿ, ಜೂನ್ 25 (ಪಿಟಿಐ, ಯುಎನ್ಐ)– ಬಿಹಾರ ಮುಖ್ಯಮಂತ್ರಿ ಲಲ್ಲೂ ಪ್ರಸಾದ್ ಯಾದವ್ ಅವರು ರಾಜೀನಾಮೆ ನೀಡಬೇಕು, ಇಲ್ಲವೇ ಅವರನ್ನು ಪದಚ್ಯುತಗೊಳಿಸಲಾಗುವುದು ಎಂದು ವಿಭಜಿತ ಜನತಾ ದಳ ಗುಂಪು ಇಂದು ಎಚ್ಚರಿಕೆ ನೀಡಿದೆ. ಆದರೆ ಇಂತಹ ಯಾವುದೇ ಪ್ರಯತ್ನಕ್ಕಿಳಿಯದಂತೆ ದಳ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ. ಎರಡೂ ಬಣಗಳ ನಾಯಕರನ್ನು ಸೋಮವಾರ ದೆಹಲಿಗೆ ಕರೆದಿರುವ ಬೊಮ್ಮಾಯಿ ಅವರು ಬಿಕ್ಕಟ್ಟುಪರಿಹಾರಕ್ಕೆ ಸರ್ವಯತ್ನ ನಡೆಸುತ್ತಿದ್ದಾರೆ.
ಜನತಾದಳಕ್ಕೆ ಹಾಗೂ ಅದರ ಸರ್ಕಾರಗಳಿಗೆ ಹಾನಿಯಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಬೊಮ್ಮಾಯಿ ಅವರು ಎರಡೂ ಬಣಗಳ ನಾಯಕರನ್ನು ಕೇಳಿಕೊಂಡಿದ್ದಾರೆ. ಪರಸ್ಪರ ಪತ್ರಿಕಾ ಹೇಳಿಕೆ ಸಮರ ನಡೆಸುವುದನ್ನು ನಿಲ್ಲಿಸುವಂತೆ ಅವರು ಕರೆ ನೀಡಿದ್ದಾರೆ.
ಸಂಧಾನ ಯತ್ನ ನಾಳೆ ಮುಂದು ವರೆಯಲಿದ್ದು ಬಿಜು ಪಟ್ನಾಯಕ್ ಹಾಗೂ ರಾಮಕೃಷ್ಣ ಹೆಗಡೆ ಅವರೂ ಮಾತುಕತೆ ಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಜಪಾನ್ ಪ್ರಧಾನಿ ಹಾತಾ ರಾಜೀನಾಮೆ
ಟೋಕಿಯೋ, ಜೂನ್ 25 (ರಾಯಿಟರ್)– ಜಪಾನ್ ಪ್ರಧಾನಿ ತ್ಸುತೋಮು ಹಾತಾ ಅವರು ರಾಜೀನಾಮೆ ನೀಡಿದ್ದಾರೆ.
ಅವರೊಂದಿಗೆ ಅವರ ಸಂಪುಟದ ಎಲ್ಲಾ ಸದಸ್ಯರೂ ಇಂದು ರಾಜೀನಾಮೆ ನೀಡಿದರು. ವಿರೋಧ ಪಕ್ಷದವರು ಹಾತಾ ಅವರ ಅಲ್ಪಸಂಖ್ಯಾತ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿಲುವಳಿ ಕುರಿತು ಸಂಸತ್ತಿನಲ್ಲಿ ಚರ್ಚೆ ಆರಂಭವಾಗುವ ಒಂದು ತಾಸಿನ ಮೊದಲು ಹಾತಾ ಅವರು ಟಿವಿಯಲ್ಲಿ ಕಾಣಿಸಿಕೊಂಡು, ಚುನಾವಣೆ ಘೋಷಿಸಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಲು ತಾವು ಸಿದ್ಧರಿಲ್ಲ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.