ಕಲ್ಪನಾಥ ರಾಯ್ ಬಂಧನ– ತಿಹಾರ್ ಜೈಲಿಗೆ
ನವದೆಹಲಿ, ಫೆ. 12 (ಪಿಟಿಐ)– ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂನ ಆರು ಸಹಚರರಿಗೆ ಆಶ್ರಯ ನೀಡಿದ ಆರೋಪಕ್ಕಾಗಿ ಸಿಬಿಐ ಇಂದು ಮಾಜಿ ಕೇಂದ್ರ ಸಚಿವ ಕಲ್ಪನಾಥ ರಾಯ್ ಅವರನ್ನು ಬಂಧಿಸಿ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಿತು. ರಾಯ್ ಅವರನ್ನು ಫೆ. 25ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಬಿಜೆಪಿ ಎಂಪಿ ಬೃಜ್ಭೂಷಣ್ ಶರಣ್ ಮತ್ತು ಸಂಜಯ್ ಸಿಂಗ್ ಅವರ ಬಂಧನಕ್ಕೆ ವಿಶೇಷ ನ್ಯಾಯಾಧೀಶ ಎಸ್.ಎನ್.ಧಿಂಗ್ರಾ ಅವರು ಇಂದು ಮತ್ತೆ ಜಾಮೀನುರಹಿತ ವಾರಂಟ್ ಹೊರಡಿಸಿ ಪ್ರಕರಣದ ವಿಚಾರಣೆಯನ್ನು ಫೆ. 26ಕ್ಕೆ ಮುಂದೂಡಿದರು.
ಮೂರನೇ ಅಭ್ಯರ್ಥಿ ತೆರೆಮರೆಯಲ್ಲಿ ಜಟಾಪಟಿ
ಬೆಂಗಳೂರು, ಫೆ. 12– ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರುವರಿ 19ರಂದು ನಡೆಯಲಿರುವ ಚುನಾವಣೆಗೆ ಮೂರನೇ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ದಳದ ನಾಯಕರಲ್ಲಿ ಜಾತಿಮತ, ಪುರುಷ–ಮಹಿಳೆ, ಪ್ರಬಲ–ದುರ್ಬಲ ಕೋಮಿನ ಲೆಕ್ಕಾಚಾರದಲ್ಲಿ ತೆರೆಮರೆಯಲ್ಲಿ ನಡೆದ ಜಟಾಪಟಿ ಪಕ್ಷದಲ್ಲಿ ಅತೃಪ್ತಿಯ ಹೊಗೆಗೆ ಕಾರಣವಾಗಿದೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಫೆ. 9ರಂದು ತರಾತುರಿಯಲ್ಲಿ, ಪಕ್ಷದಲ್ಲಿರುವ ಹಿರಿಯ ಮಹಿಳೆಯರ ಜಾತಕವನ್ನು ಜಾಲಾಡಿ ಕೊನೆಗೆ ಕಡೇಗಳಿಗೆಯಲ್ಲಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಪ್ರಫುಲ್ಲಾ ಮಧುಕರ್ ಹಾಗೂ ಕೆ.ಬಿ. ಮಲ್ಲಿಕಾರ್ಜುನ್ ಅವರಿಂದ ನಾಮಪತ್ರ ಹಾಕಿಸುವ ಶಾಸ್ತ್ರ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.