ADVERTISEMENT

25 ವರ್ಷಗಳ ಹಿಂದೆ| ಗುರುವಾರ, 26–1–1995

ಗುರುವಾರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 15:27 IST
Last Updated 25 ಜನವರಿ 2020, 15:27 IST

ಜನಶಕ್ತಿ ನಿರ್ಲಕ್ಷ್ಯ ಸಲ್ಲ ರಾಷ್ಟ್ರಪತಿ ಎಚ್ಚರಿಕೆ

ನವದೆಹಲಿ, ಜ.25– ಸಾರ್ವಜನಿಕ ಜೀವನದಲ್ಲಿ ನ್ಯಾಯನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು ಬರುವಂತೆ ರಾಷ್ಟ್ರಪತಿ ಡಾ. ಶಂಕರ ದಯಾಳ್‌ ಶರ್ಮಾ ಅವರು ಇಂದು ರಾಜಕಾರಣಿಗಳಿಗೆ ಕರೆ ನೀಡಿದರು.

‘ನಮ್ಮ ಜನಸಮುದಾಯದ ಅರಿವಿನ ಶಕ್ತಿಯನ್ನು ನಿರ್ಲಕ್ಷಿಸಬಾರದು, ಆಡಳಿತ ವ್ಯವಸ್ಥೆ ನಮ್ಮ ಅಗತ್ಯಗಳಿಗೆ ಸ್ಪಂದಿಸುವಂತೆ ಇರಬೇಕು’ ಎಂದು ಅವರು ಗಣರಾಜ್ಯೋತ್ಸವದ ನಿಮಿತ್ತ ಇಂದು ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಪ್ರಸಾರ ಭಾಷಣದಲ್ಲಿ ಕಿವಿಮಾತು ಹೇಳಿದರು.

ADVERTISEMENT

ರಾಷ್ಟ್ರೀಯತೆ ಚಳವಳಿಯ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ಈದ್ಗಾ: ಇಂದು ಅಂಜುಮನ್ ಅಧ್ಯಕ್ಷರಿಂದ ಧ್ವಜಾರೋಹಣ

ಹುಬ್ಬಳ್ಳಿ, ಜ.25– ಇಲ್ಲಿನ ಈದ್ಗಾ ಮೈದಾನದಲ್ಲಿ ನಾಳೆ ಮುಂಜಾನೆ 7 ಗಂಟೆಗೆ ಸರಿಯಾಗಿ ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ಕಾಲೆಬುಡ್ಡೆ ಅವರು ಧ್ವಜಾರೋಹಣ ನೆರವೇರಿಸುವರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಇಂದು ಸಂಜೆ ಅಂಜುಮನ್ ಸಂಸ್ಥೆಯ ಮೂಲಗಳು ಈ ವಿಷಯ ತಿಳಿಸಿದವು. ಬಿಗಿಭದ್ರತೆಯಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಲಿದ್ದು ಈದ್ಗಾ ಮೈದಾನದ ಒಂದು ಕಿಲೋಮೀಟರ್ ಫಾಸಲೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಲಿದ್ದಾರೆ.

ಧ್ವಜಾರೋಹಣ ಸಮಾರಂಭದಲ್ಲಿ ಅಂಜುಮನ್ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಅದರ ಸದಸ್ಯರಾಗಿರುವ ಎಲ್ಲಾ ಮುತವಲ್ಲಿಗಳು ಹಾಗೂ ನಗರದ ಅತಿ ಗಣ್ಯವ್ಯಕ್ತಿಗಳು ಆಮಂತ್ರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.