ADVERTISEMENT

ಶುಕ್ರವಾರ, 21–3–1969

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 20:23 IST
Last Updated 20 ಮಾರ್ಚ್ 2019, 20:23 IST

ಮಧ್ಯಪ್ರದೇಶ ಮುಖ್ಯಮಂತ್ರಿ ರಾಜೀನಾಮೆ ಅಂಗೀಕಾರ

ಭೂಪಾಲ್, ಮಾ. 20– ಕೇವಲ ಒಂದು ವಾರದ ಹಿಂದೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರಾಜಾ ನರೇಶಚಂದ್ರಸಿಂಗರ ರಾಜೀನಾಮೆ ಮತ್ತು ಮಾಜಿ ಮುಖ್ಯಮಂತ್ರಿ ಶ್ರೀ. ಜಿ.ಎನ್. ಸಿಂಗ್‌ ಅವರು ತಮ್ಮ 19 ಜನ ಅನುಯಾಯಿಗಳೊಡನೆ ಮತ್ತೆ ಕಾಂಗ್ರೆಸ್ಸಿಗೆ ಪಕ್ಷಾಂತರಗೊಂಡುದರಿಂದ ರಾಜ್ಯದ ರಾಜಕೀಯ ಈಗ ಇನ್ನೊಂದು ತಿರುವು ತೆಗೆದುಕೊಂಡಿದೆ

ನರೇಶಚಂದ್ರ ಸಿಂಗರ ರಾಜೀನಾಮೆಯನ್ನು ರಾಜ್ಯಪಾಲ ಶ್ರೀ ಕೆ.ಸಿ. ರೆಡ್ಡಿಯವರು ಅಂಗೀಕರಿಸಿ ಬೇರೆ ವ್ಯವಸ್ಥೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರೆಯುವಂತೆ ಕೇಳಿದ್ದಾರೆ.

ADVERTISEMENT

ಭಾರತ ಸೈನ್ಯದ ದಳಪತಿ ಆಗಿ ಲೆ.ಜ. ಮಣೇಕ್ ಷಾ

ನವದೆಹಲಿ, ಮಾ. 20– ಲೆ.ಜ. ಎಸ್.ಎಚ್.ಎಫ್.ಜೆ. ಮಣೇಕ್‌ಷಾ ಅವರನ್ನು ಜ. ಪಿ.ಪಿ. ಕುಮಾರ ಮಂಗಳಂ ಅವರ ಸ್ಥಾನದಲ್ಲಿ, ಭಾರತದ ಸೈನ್ಯದ ಮಹಾದಂಡನಾಯಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಇಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಮಣೇಕ್ ಷಾ ಅವರು ಜೂನ್ 8ರಂದು ಮಹಾದಂಡನಾಯಕರಾಗಿ ಅಧಿಕಾರ ವಹಿಸುವರು ಎಂದೂ ಆ ಪ್ರಕಟಣೆ ತಿಳಿಸಿದೆ.

26ರ ಹೊತ್ತಿಗೆ ಎಂ.ಪಿ.ಯಲ್ಲಿ ಕಾಂಗ್ರೆಸ್ ಸರ್ಕಾರ?

ನವದೆಹಲಿ, ಮಾ. 20– ಮಧ್ಯ ಪ್ರದೇಶ ವಿಧಾನಸಭೆಯು ವಿಸರ್ಜಿತವಾಗದಿದ್ದಲ್ಲಿ ಕಾಂಗ್ರೆಸ್ ಅಥವಾ ಕಾಂಗ್ರೆಸ್ ನೇತೃತ್ವದಲ್ಲಿನ ಸಮ್ಮಿಶ್ರ ಪಕ್ಷವು ಹೊಸ ಸರಕಾರವನ್ನು ಬಹುಶಃ ಈ ತಿಂಗಳು 26ರಂದು ರಚಿಸುವುದು.

ಸರ್ಕಾರ ರಚಿಸುವುದಕ್ಕೆ ಸ್ಪಷ್ಟ ಬಹುಮತವಿದೆಯೆಂದು ಹೇಳಿಕೊಳ್ಳುತ್ತಿರುವ ಮಧ್ಯಪ್ರದೇಶ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ನಾಯಕರನ್ನು ರಾಜ್ಯಪಾಲರು ಆಹ್ವಾನಿಸಬೇಕೆಂಬುದು ಇಲ್ಲಿಯ ಕೇಂದ್ರ ನಾಯಕತ್ವದ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.