ADVERTISEMENT

ಶುಕ್ರವಾರ, 23–5–1969

​ಪ್ರಜಾವಾಣಿ ವಾರ್ತೆ
Published 22 ಮೇ 2019, 18:30 IST
Last Updated 22 ಮೇ 2019, 18:30 IST

ಗುಂಟೂರು ಜಿಲ್ಲೆಯೊಂದರಲ್ಲೇ ಮಳೆ, ಪ್ರವಾಹಕ್ಕೆ 500ಕ್ಕೂ ಹೆಚ್ಚು ಮಂದಿ ಬಲಿ

ಹೈದರಾಬಾದ್, ಮೇ 22– ಗುಂಟೂರು ಜಿಲ್ಲೆಯ ನೀಲಯಂಪಾಳ್ಯಂ ಗ್ರಾಮದ ಎಲ್ಲಾ ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆಂದು ಶಂಕೆಪಟ್ಟಿರುವುದಾಗಿ ಅಧಿಕೃತ ವಕ್ತಾರರೊಬ್ಬರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಮೂರು ದಿನ ಸಂಪರ್ಕ ಕಡಿದು ಹೋಗಿದ್ದ ಆ ಇಡೀ ಗ್ರಾಮ ಕೊಚ್ಚಿ ಹೋಗಿದೆಯೆಂದು ಅವರು ಹೇಳಿದರು.

ADVERTISEMENT

ಐದು ದಿನಗಳು ಬಿರುಗಾಳಿ ಮತ್ತು ಮಳೆಗೆ ತುತ್ತಾಗಿದ್ದ ಕರಾವಳಿಯಲ್ಲಿ ಸುಮಾರು 350 ಜನ ಸತ್ತಿದ್ದಾರೆಂದು ಎರಡು ದಿನಗಳ ನಂತರ ಇಂದು ಸಂಜೆ ಗೊತ್ತಾಗಿದೆ. ಐದುನೂರಕ್ಕೂ ಹೆಚ್ಚು ಜನ ಸತ್ತಿದ್ದಾರೆಂದು ಅನಧಿಕೃತ ವರದಿ.

ಸಾವಿರಾರು ಜಾನುವಾರುಗಳು ನಾಶವಾಗಿವೆ. ಪ್ರವಾಹದಿಂದ ಉಕ್ಕಿ ಹರಿಯುವ ನದಿ, ತೊರೆಗಳಲ್ಲಿ ಸತ್ತ ಹಲವು ದೇಹಗಳು ತೇಲುತ್ತಿವೆ.

ದೇವಸ್ಥಾನದಲ್ಲಿ ತಂಗಿದ್ದ 70 ಮಂದಿ ಜಲಸಮಾಧಿ

ಹೈದರಾಬಾದ್‌, ಮೇ 22– ವಡ್ಡರ ಜನಾಂಗಕ್ಕೆ ಸೇರಿದ ಎಪ್ಪತ್ತು ಮಂದಿ ಗುಂಟೂರು ಜಿಲ್ಲೆ ಕಡದಕೂಡೂರು ಗ್ರಾಮದಲ್ಲಿ ಈಚಿನ ಪ್ರವಾಹದಲ್ಲಿ ಮುಳುಗಿ ಸತ್ತಿರಬೇಕೆಂದು ಶಂಕಿಸಲಾಗಿದೆ.

ಅವರು ಆಸರೆ ಪಡೆದಿದ್ದ ಗ್ರಾಮ ದೇವಸ್ಥಾನದಲ್ಲಿಯೇ ಹದಿನಾಲ್ಕು ದೇಹಗಳು ದೊರೆತಿವೆ.

ಜಮ್ಮಲಪಾಲಂ ಗ್ರಾಮದಲ್ಲಿ ಮನೆ ಕುಸಿದು ಆರು ಮಂದಿಯ ಇಡೀ ಸಂಸಾರ ಮರಣ ಹೊಂದಿತು.

ಚಂದ್ರನ ಹತ್ತಿರಕ್ಕೆ ಇಳಿಯುವ ಸಾಹಸ ಯಾನ ಆರಂಭ

ಹೂಸ್ಟನ್, ಮೇ 22– ಗಗನಗಾಮಿ ಸ್ಟಾಫರ್ಡ್ ಮತ್ತು ಸರ್ನನ್ ಇವರಿರುವ ಚಂದ್ರ ಕೋಶ ಇಂದು ರಾತ್ರಿ ಅಪೊಲೊ 10ರಿಂದ ಬೇರ್ಪಟ್ಟು, ಚಂದ್ರನ ಮೇಲ್ಮೈ ಕಡೆಗೆ ಇಳಿಯುವ ಸಾಹಸಭರಿತ ಏಳುಗಂಟೆಗಳ ಯಾನ ಆರಂಭಿಸಿತು.

ಕೋಶವು ಆ ಯಾನದ ಅವಧಿಯಲ್ಲಿ ಎರಡು ಬಾರಿ ಚಂದ್ರನ ಗುಂಡಿ, ಕಣಿವೆಗಳ ಹೊರಮೈಗೆ 14.8 ಕಿಲೋ ಮೀಟರುಗಳಷ್ಟು (50,000 ಅಡಿ) ಹತ್ತಿರಕ್ಕೆ ಹೋಗುವರು.

ಜುಲೈನಲ್ಲಿ ಮಾನವನನ್ನು ಚಂದ್ರನ ಮೇಲಿಳಿಸಲು ನಿಯೋಜಿಸಲಾಗಿರುವ ಸೂಕ್ಷ್ಮ ವಾಹಕ ಚಂದ್ರಕೋಶ (ಲೂನಾರ್ ಮಾಡ್ಯೂಲ್‌) ಇಂದು ರಾತ್ರಿ 12.39ಕ್ಕೆ (ಭಾರತೀಯ ಕಾಲ) ಮಾತೃವಾಹನದಿಂದ ಬೇರೆಯಾಗಿ, ಚಂದ್ರನತ್ತ ಇಳಿಯಲಾರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.