ಫರೀದಾಬಾದ್ ನಿರ್ಣಯ: ಎಸ್ಸೆನ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಸ್ತು
ನವದೆಹಲಿ, ನ. 30– ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಾಗಿರುವ ಸಂಸ್ಥೆಯ ಚುನಾವಣೆಗಳನ್ನು ಒಂದು ವರ್ಷ ಕಾಲ ಮುಂದೂಡಬೇಕೆಂದು ಫರೀದಾಬಾದ್ನಲ್ಲಿ ಕೈಗೊಂಡ ನಿರ್ಧಾರಕ್ಕೆ ಇಂದು ಶ್ರೀ ಎಸ್. ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ಒಪ್ಪಿಗೆ ಇತ್ತಿತು.
ದೇಶದಲ್ಲಿ ಈಗ ಪ್ರಾರಂಭವಾಗಿರುವ ಫ್ಯಾಸಿಸ್ಟ್ ಪ್ರವೃತ್ತಿಗಳ ವಿರುದ್ಧ ಹೋರಾಡುವುದಾಗಿ ಇಂದು ಪ್ರತಿಜ್ಞೆ ಮಾಡಿದ ಸಮಿತಿಯು ಅಧಿಕಾರಶಾಹಿ ಸಮಾಜವಾದದ ಅಪಾಯಗಳ’ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿತು.
ರಾಜಕೀಯ ಸುಭದ್ರತೆಗೆ ಅಪಾಯವನ್ನುಂಟು ಮಾಡದೆ ಪ್ರಜಾಪ್ರಭುತ್ವದ ಆಧಾರದ ಮೇಲೆ ಸಮಾಜವಾದಿ ಸಮಾಜವನ್ನು ನಿರ್ಮಿಸಬೇಕೆಂಬ ಉದ್ದೇಶವನ್ನು ಸಾಧಿಸುವುದೇ ಕಾರ್ಯಸಮಿತಿಯ ಅಪೇಕ್ಷೆ ಎಂದು ಶ್ರೀ ಸಾಧಿಕ್ ಆಲಿ ಹೇಳಿದರು.
ಪೂರ್ಣಾಧಿವೇಶನದ ನಂತರ ನಿಜ ಕಾಂಗ್ರೆಸ್ ಯಾವುದೆಂದು ನಿರ್ಧಾರ: ಸುಬ್ರಹ್ಮಣ್ಯಂ
ಮದ್ರಾಸ್, ನ. 30– ತಮ್ಮ ನಾಯಕತ್ವದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ಸಿಗರ ಬಹುಮತ ಬೆಂಬಲವಿದ್ದಾಗೂ ಯಾವುದು ದಿಟವಾದ ಕಾಂಗ್ರೆಸ್ ಎಂಬುದು ಅಹಮದಾಬಾದ್ ಮತ್ತು ಮುಂಬಯಿಗಳಲ್ಲಿ ನಡೆಯಲಿರುವ ಪೂರ್ಣಾಧಿವೇಶನದ ನಂತರ ಸ್ಪಷ್ಟಗೊಳ್ಳುವುದೆಂದು ಶ್ರೀಮತಿ ಇಂದಿರಾ ಗಾಂಧಿಯವರ ಬಣದ ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷ ಸಿ. ಸುಬ್ರಹ್ಮಣ್ಯಂ ಅವರು ಇಂದು ಇಲ್ಲಿ ತಿಳಿಸಿದರು.
ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರು ಯಾವ ಕಾಂಗ್ರೆಸ್ಸಿನಲ್ಲಿ ನಿಷ್ಠೆ ಹೊಂದಿದ್ದಾರೆ ಮತ್ತು ಎಷ್ಟು ಮಂದಿ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ ಎಂಬುದು ಪೂರ್ಣಾಧಿವೇಶನದಲ್ಲಿ ವ್ಯಕ್ತವಾಗುವುದೆಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.