ಲೋಕಸಭೆಯ 27 ಸ್ಥಾನಗಳಿಗೆ ರಾಜ್ಯದ 250 ಮಂದಿ ಸ್ಪರ್ಧೆ
ಬೆಂಗಳೂರು, ಫೆ. 8– ಮಧ್ಯಂತರ ಚುನಾವಣೆಯಲ್ಲಿ ಮೈಸೂರು ರಾಜ್ಯದ 27 ಕ್ಷೇತ್ರಗಳಿಂದ ಸುಮಾರು 250 ಮಂದಿ ಅಭ್ಯರ್ಥಿಗಳು ಇಂದು ಸಂಜೆಯವರೆಗೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕೆಲವು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿರುವವರ ನಿಖರ ಸಂಖ್ಯೆಯು ಬೆಂಗಳೂರಿಗೆ ತಲುಪಿಲ್ಲವಾದರೂ ಎಲ್ಲ ಕ್ಷೇತ್ರಗಳ ಪ್ರಮುಖ ಅಭ್ಯರ್ಥಿಗಳು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಾಮಪತ್ರಗಳನ್ನು ಒಪ್ಪಿಸಿದ ವರದಿಗಳು ಬಂದಿವೆ.
ಕಾನೂನು ಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಮತ್ತು ಜನಸಂಘದ ಅಭ್ಯರ್ಥಿ ಶ್ರೀ ಗೋಪಾಲಕೃಷ್ಣ ಅಡಿಗ ಅವರು ಪ್ರತಿಸ್ಪರ್ಧಿಗಳಾಗಿರುವ ಬೆಂಗಳೂರು ಕ್ಷೇತ್ರದಿಂದ, ಅವರಿಬ್ಬರನ್ನೊಳಗೊಂಡು ಒಟ್ಟು 22 ಮಂದಿ ಕಣಕ್ಕೆ ಇಳಿದಿದ್ದಾರೆ.
ಪರಸ್ಪರ ಅರಿವು, ಶಾಂತಿಗೆ ಚಂದ್ರಯಾತ್ರಿಗಳ ಮನವಿ
ಹ್ಯೂಸ್ಟನ್, ಫೆ. 8– ಚಂದ್ರನ ಮೇಲೆ ಯಶಸ್ವಿ ಪ್ರಯೋಗಗಳನ್ನು ನಡೆಸಿ, ಭೂಮಿಯಿಂದ ಸುಮಾರು 2,03,000 ಮೈಲಿ ದೂರದಲ್ಲಿ ಸೆಕೆಂಡಿಗೆ 3,600 ಅಡಿ ವೇಗದಲ್ಲಿ ಧರೆಗೆ ಮರಳುತ್ತಿರುವ ಚಂದ್ರಯಾತ್ರಿಗಳು ಇಂದು ‘ವಿಶ್ವದಾದ್ಯಂತ ಪರಸ್ಪರ ಅರಿವು ಮತ್ತು ಶಾಂತಿಗಾಗಿ ಶ್ರಮಿಸಬೇಕೆಂದು’ ಮಾನವ ಜನಾಂಗಕ್ಕೆ ಮನವಿ ಮಾಡಿಕೊಂಡರು.
ಚಂದ್ರಮೃತ್ತಿಕೆ, ಚಂದ್ರಶಿಲೆ ಮತ್ತಿತರ ಚಿತ್ರಗಳ ಅಮೂಲ್ಯ ಸಂಗ್ರಹದೊಂದಿಗೆ ಭೂಮಿಗೆ ಹಿಂತಿರುಗುತ್ತಿರುವ ಅಲನ್ ಷಪರ್ಡ್, ಎಡ್ಗರ್ ಮಿಚೆಲ್ ಮತ್ತು ಮಾತೃನೌಕೆ ಚಾಲಕ ಸ್ಟೂವರ್ಟ್ ರೂಸಾ ಅವರು ಮಂಗಳವಾರ ಬೆಳಿಗ್ಗೆ ಪ್ರಸಾರವಾಗುವ ಟೆಲಿವಿಷನ್ ಪತ್ರಿಕಾ
ಗೋಷ್ಠಿಗೆ ಸಿದ್ಧರಾಗುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.