ADVERTISEMENT

25 ವರ್ಷಗಳ ಹಿಂದೆ | ಒಳಜಗಳ: ರಾಜ್ಯದ ಎಲ್ಲರಿಗೂ ಸೋಲು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 22:00 IST
Last Updated 10 ಆಗಸ್ಟ್ 2022, 22:00 IST
   

ಒಳಜಗಳ: ರಾಜ್ಯದ ಎಲ್ಲರಿಗೂ ಸೋಲು

ಕಲ್ಕತ್ತ, ಆ.10– ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ಕರ್ನಾಟಕದಿಂದ ಸ್ಪರ್ಧಿಸಿದ್ದ ಎಲ್ಲಾ ಆರು ಮಂದಿ ಅಭ್ಯರ್ಥಿಗಳೂ ದಯನೀಯವಾಗಿ ಪರಾಭವಗೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ನೀತಿ ರೂಪಿಸುವ ಉನ್ನತಾಧಿಕಾರ ಸಮಿತಿಯಾದ ಕಾರ್ಯಕಾರಿಣಿಗೆ ಎಐಸಿಸಿ ಪೂರ್ಣಾಧಿವೇಶನದ ಸಂದರ್ಭದಲ್ಲಿ ನಿನ್ನೆ ನಡೆದ ಚುನಾವಣೆಯ ಫಲಿತಾಂಶವನ್ನು ಇಂದು ಪ್ರಕಟಿಸಲಾಯಿತು.

ADVERTISEMENT

ಒಟ್ಟು ಹತ್ತು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಂತಿಮವಾಗಿ 49 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದರು. ಕರ್ನಾಟಕದಿಂದ 9 ಮಂದಿ ಮುಖಂಡರು ನಾಮಪತ್ರ ಸಲ್ಲಿಸಿದ್ದರಾದರೂ ಕೇಂದ್ರದ ಮಾಜಿ ಸಚಿವರಾದ ಶಂಕರಾನಂದ, ಎಂ.ವಿ.ಚಂದ್ರಶೇಖರಮೂರ್ತಿ ಹಾಗೂ
ಎಸ್.ಎಂ.ಕೃಷ್ಣ ಅವರು ಹಿಂತೆಗೆದು ಕೊಂಡಿದ್ದರಿಂದ ಅಂತಿಮವಾಗಿ ಬಿ.ಜನಾರ್ದನ ಪೂಜಾರಿ, ಮಾರ್ಗರೆಟ್‌ ಆಳ್ವ, ಸಿ.ಕೆ.ಜಾಫರ್‌ ಷರೀಫ್‌, ಎಚ್‌.ಹನುಮಂತಪ್ಪ, ಎಸ್‌.ಬಂಗಾರಪ್ಪ ಹಾಗೂ ವೀರಪ್ಪ ಮೊಯಿಲಿ ಕಣದಲ್ಲಿ ಉಳಿದಿದ್ದರು. ಆದರೆ ಇಂದು ಫಲಿತಾಂಶ ಪ್ರಕಟವಾದಾಗ ಎಲ್ಲಾ ಆರು ಮಂದಿಯೂ ಬಹಳ ಕಡಿಮೆ ಪ್ರಮಾಣದಲ್ಲಿ ಮತಗಳನ್ನು ಪಡೆದಿರುವುದು ಬಹಿರಂಗವಾಯಿತು. ರಾಜ್ಯದ ಮುಖಂಡ ರಲ್ಲಿನ ಗುಂಪುಗಾರಿಕೆ ಹಾಗೂ ಒಳಜಗಳವೇ ಹೆಚ್ಚು ಮಂದಿ ಸ್ಪರ್ಧಿಸಲು ಕಾರಣವಾಗಿದ್ದು, ಒಮ್ಮತದ ಅಭ್ಯರ್ಥಿ ಆಯ್ಕೆಯ ಕೊರತೆಯೇ ಸೋಲಿಗೆ ಕಾರಣವೆನ್ನಲಾಗಿದೆ.

ರಾಜ್ಯದಿಂದ ಏಕ ಅಭ್ಯರ್ಥಿ ಸ್ಪರ್ಧಿಸಿದ್ದರೆ ಹೆಚ್ಚು ಕಡಿಮೆ ಗೆಲುವು ಸಾಧಿಸಬಹುದಿತ್ತು. ಆರು ಮಂದಿ ಸ್ಪರ್ಧಿಸಿ ಒಬ್ಬರೂ ಗೆಲ್ಲಲಾಗದೆ ನಗೆಪಾಟಲಿಗೆ ಒಳಗಾದಂತಾಗಿದೆ ಎಂದು ರಾಜ್ಯದ ಮುಖಂಡರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.