ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಮೇ 27, 1997

​ಪ್ರಜಾವಾಣಿ ವಾರ್ತೆ
Published 26 ಮೇ 2022, 19:30 IST
Last Updated 26 ಮೇ 2022, 19:30 IST
   

3.75 ಕೋಟಿ ವಿದೇಶಿ ದೇಣಿಗೆ: ಕಾಂಗ್ರೆಸ್‌ಗೆ ಕೋರ್ಟ್‌ ನೋಟಿಸ್‌
ನವದೆಹಲಿ, ಮೇ 26 (ಯುಎನ್‌ಐ,ಪಿಟಿಐ)–
ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ 1993–1995ರ ಅವಧಿಯಲ್ಲಿ 3.75 ಕೋಟಿ ರೂಪಾಯಿ ದೇಣಿಗೆ ಸ್ವೀಕರಿಸಿದ ಆರೋಪ ಕುರಿತು ವಿಚಾರಣೆ ನಡೆಸುತ್ತಿರುವ ದೆಹಲಿಯ ಹೈಕೋರ್ಟ್‌, ಕಾಂಗ್ರೆಸ್‌ ಪಕ್ಷಕ್ಕೆ ಇಂದು ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಈ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮಹೇಂ‌ದ್ರ ನಾರಾಯಣ್‌ ಮತ್ತು ನ್ಯಾಯಮೂರ್ತಿಎಸ್.ಕೆ. ಮಹಾಜನ್ ಅವರನ್ನು ಒಳಗೊಂಡ ಪೀಠ ಜುಲೈ 15ರ ಒಳಗೆ ಉತ್ತರಿಸಲು ಆದೇಶಿಸಿದೆ. ಜುಲೈ 15ರಂದು ಮುಂದಿನ ವಿಚಾರಣೆ ನಡೆಯಲಿದೆ.

*

ADVERTISEMENT

‘ಕೆಇಬಿ ಕಾರ್ಯನಿರ್ವಹಣೆ ಸುಧಾರಣೆಗೆ ಶೀಘ್ರ ಕ್ರಮ’
ಮೈಸೂರು, ಮೇ 26–
ವಿದ್ಯುತ್ ಮಂಡಳಿಯ ಕಾರ್ಯನಿರ್ವಹಣೆ ಸುಧಾರಿಸುವುದರ ಕಡೆಗೆ ಅಗತ್ಯ ಗಮನ ನೀಡುವ ಮೂಲಕ ರಾಜ್ಯವನ್ನು ಕಾಡುತ್ತಿರುವ ವಿದ್ಯುತ್‌ ಅಭಾವವನ್ನು ಇದ್ದುದರಲ್ಲಿ ಸುಧಾರಿಸಲು ಸರ್ಕಾರ ನಿರ್ಧರಿಸಿದ್ದು, ಮಂಡಳಿಯ ಕಾರ್ಯ ನಿರ್ವಹಣೆಯನ್ನು ಒಂದು ವರ್ಷದ ಒಳಗಾಗಿ ಸುಧಾರಿಸದೇ ಗತ್ಯಂತರವಿಲ್ಲವೆಂದು ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

‘ಎಲ್ಲಿ ಹೋದರಲ್ಲಿ ಜನ ವಿದ್ಯುತ್‌ ಅಭಾವದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಜನರಿಂದ ಆಯ್ಕೆಯಾದಜನಪ್ರತಿನಿಧಿಗಳು ಅದಕ್ಕೆ ಉತ್ತರ ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

‘ರಾಜ್ಯವನ್ನು ಕಾಡುತ್ತಿರುವ ವಿದ್ಯುತ್‌ ಅಭಾವ ನಿನ್ನೆ ಮೊನ್ನೆಯದ್ದಲ್ಲ. ಅದು ವರ್ಷಗಳಿಂದ ಬೆಳೆದುಕೊಂಡು ಬಂದಿದೆ. ಈ ಹಂತದಲ್ಲಿ ಅದಕ್ಕಾಗಿ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ’ ಎಂದ ಅವರು, ‘ವಿದ್ಯುತ್‌ ಪೂರೈಕೆಯನ್ನು ಸರಿಯಾಗಿ ಮಾಡುವುದರ ಮೂಲಕ ನಾವು ಜನತೆಗೆ ಉತ್ತರ ನೀಡಬೇಕಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.