ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 19:12 IST
Last Updated 3 ಜುಲೈ 2022, 19:12 IST
   

ಜಾಲಪ್ಪ ಸೇರಿ 14 ಸದಸ್ಯರಿಂದ ಬಹಿಷ್ಕಾರ
ಕಡೆಗಳಿಗೆಯಲ್ಲಿ 7 ಸಚಿವರ ಮನಪರಿವರ್ತೆನೆ

ಬೆಂಗಳೂರು, ಜುಲೈ 3 – ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ರಾಜ್ಯದ 65 ಮತದಾರರ ಪೈಕಿ ಲಾಲೂ ಪ್ರಸಾದ್‌ ಯಾದವ್‌ ಬೆಂಬಲಿಗರಾದ ಕೇಂದ್ರ ಸಚಿವರಾದ ಆರ್.ಎಲ್‌. ಜಾಲಪ್ಪ ಸೇರಿದಂತೆ ಹದಿನಾಲ್ಕು ಮಂದಿ ಸದಸ್ಯರು ಚುನಾವಣೆ ಬಹಿಷ್ಕರಿಸಿದರು.‌

ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಏಳು ಮಂದಿ ಸಚಿವರು ಕೊನೆ ಗಳಿಗೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಮೂಲಕ ಜೆ.ಎಚ್‌. ಪಟೇಲ್‌ ನೇತೃತ್ವದ ದಳ ಸರ್ಕಾರವನ್ನು ಬಿಕ್ಕಟ್ಟಿನಿಂದ ಪಾರು ಮಾಡಿದರು.

ADVERTISEMENT

ಚುನಾವಣೆ ಬಹಿಷ್ಕರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ನಿನ್ನೆ ಎಚ್ಚರಿಕೆ ಕೊಟ್ಟಿದ್ದ ಪಟೇಲ್‌, ಮತದಾನದಲ್ಲಿ ಪಾಲ್ಗೊಳ್ಳದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ನೀಡಿದ ನಿರ್ದೇಶನದಂತೆ ನಡೆಯಲು ಮುಂದಾಗಿದ್ದ ಈ ಸಚಿವರು, ಸರ್ಕಾರ ಉರುಳಬಾರದೆಂದು ಕೊನೆಗಳಿಗೆಯಲ್ಲಿ ಮತದಾನದಲ್ಲಿ ಭಾಗವಹಿಸಿದ್ದು ಇಂದಿನ ಹೊಸ ರಾಜಕೀಯ ಬೆಳವಣಿಗೆಯಾಗಿದೆ.

ಚುನಾವಣೆ ಬಹಿಷ್ಕರಿಸಲು ಕರೆ ನೀಡಿದ್ದ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ರ ಬೆಂಬಲಕ್ಕೆ ನಿಂತ ಜಾಲಪ್ಪ ಅವರ ಸೂಚನೆಯ ಮೇರೆಗೆ ಮತದಾನ ಅಂತ್ಯವಾಗಲು ಹದಿನೈದು ನಿಮಿಷಗಳಿದ್ದಾಗ ಈ ಸಚಿವರು ಮತದಾನದಲ್ಲಿ ಪಾಲ್ಗೊಂಡರು.‌

ನವದೆಹಲಿ ವರದಿ: ಜನತಾದಳ ರಾಷ್ಟ್ರೀಯ ಮಂಡಲಿಯ ಒಟ್ಟು 1,140 ಸದಸ್ಯರಲ್ಲಿ 650 ಮಂದಿ ಮತ ಚಲಾಯಿಸಿದ್ದಾರೆ. ದೇಶಾದ್ಯಂತ ಮತದಾನ ಶಾಂತಿಯುತವಾಗಿ ಎಂದು ಪಕ್ಷ ಪ್ರಧಾನ ಕಾರ್‍ಯದರ್ಶಿ ಬಾಪು ಕಲದಾತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.