ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ – ಶನಿವಾರ 4.1.1997

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 19:30 IST
Last Updated 3 ಜನವರಿ 2022, 19:30 IST
   

ಸಿಪಿಪಿ ನೂತನ ನಾಯಕರಾಗಿ ಸೀತಾರಾಂ ಕೇಸರಿ ಆಯ್ಕೆ

ನವದೆಹಲಿ, ಜ. 3– ಎರಡು ವಾರಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ನೂತನ ನಾಯಕನ ಆಯ್ಕೆ ನಿರೀಕ್ಷೆಯಂತೆ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಅವರನ್ನು ಇಂದು ಒಮ್ಮತದಿಂದ ಆಯ್ಕೆ ಮಾಡಲಾಯಿತು.

ಇದರಿಂದಾಗಿ ಕೆಲವು ವಿರೋಧದ ನಡುವೆಯೂ ಕಾಂಗ್ರೆಸ್ ಸರ್ವ ಅಧಿಕಾರವು ಮತ್ತೆ ಏಕವ್ಯಕ್ತಿಯ ಕೈಯಲ್ಲೇ ಕೇಂದ್ರೀಕೃತವಾಗುವ ಸಂಪ್ರದಾಯಕ್ಕೆ ಕಟ್ಟುಬಿದ್ದಂತಾಯಿತು.

ADVERTISEMENT

ಈ ಮಧ್ಯೆ ತಮ್ಮ ಆಯ್ಕೆಯ ನಂತರ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಸರಿ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಗುಂಪಿನ ನಾಯಕರಾಗಿ ಮಹಾರಾಷ್ಟ್ರದ ಶರದ್ ಪವಾರ್ ಅವರನ್ನು ಆಯ್ಕೆ ಮಾಡುವ ಇಂಗಿತವನ್ನು ನೀಡಿದ್ದರಿಂದ ಸಂಸತ್‌ನ ಉಭಯ ಸದನಗಳ ನಾಯಕರ ಆಯ್ಕೆಯ ಪ್ರಶ್ನೆಯು ಮುಗಿದಂತಾಯಿತು.

ಚಲನಚಿತ್ರೋತ್ಸವದಲ್ಲಿ ಭಾಗವಹಿಸಲಾರೆ– ಡಾ. ರಾಜ್‌ಕುಮಾರ್

ತಿರುವನಂತಪುರ, ಜ. 3– ‘ನಿಮ್ಮ ವಿಶ್ವಾಸದ ಆಹ್ವಾನಕ್ಕೆ ಧನ್ಯವಾದಗಳು. ಆದರೆ, ಚಿತ್ರೋತ್ಸವದಲ್ಲಿ ಭಾಗವಹಿಸಲಾರೆ’. ಕನ್ನಡದ ಮೇರು ನಟ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್‌ಕುಮಾರ್ ಅವರು ಕೇರಳದ ಸಂಸ್ಕೃತಿ ಸಚಿವ ಟಿ.ಕೆ. ರಾಮಕೃಷ್ಣನ್ ಅವರಿಗೆ ಬರೆದ ಪತ್ರ. ಡಾ. ರಾಜ್ ಅವರ ಪತ್ರ ಗುರುವಾರ ಸಂಜೆ ಸಚಿವರ ಕಚೇರಿ ತಲುಪಿದೆ.

ಇಲ್ಲಿನ ವ್ಯವಸ್ಥೆ ಆಗಿರುವ 28ನೆಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಸಂದರ್ಭದಲ್ಲಿ ಡಾ. ರಾಜ್‌ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಬಗ್ಗೆ ಇದ್ದ ಊಹಾಪೋಹಗಳು ಇದರಿಂದ ನಿವಾರಣೆ ಆಗಿವೆ. ಡಾ. ರಾಜ್ ಅವರ ಪತ್ರ ತಲುಪಿದ ನಂತರ ಅವರ ಮನ ಒಲಿಸಲು ಮತ್ತೆ ಪ್ರಯತ್ನಿಸದಿರಲು ಕೇರಳ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.