ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಮಂಗಳವಾರ 14.1.1997

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 19:30 IST
Last Updated 13 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೆಟ್ರೋಲ್‌ ಬೆಲೆ ಏರಿಕೆ ಇಲ್ಲ: ಪ್ರಧಾನಿ

ಬೀದರ್‌, ಜ. 13– ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು. ಈ ಸಂಬಂಧ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದರು.

ತಾವು ಅಧಿಕಾರಕ್ಕೆ ಬಂದ ನಂತರದ ಏಳು ತಿಂಗಳ ಅವಧಿಯಲ್ಲಿ ಯಾವುದೇ ವಸ್ತುಗಳ ಬೆಲೆ ಹೆಚ್ಚಿಸಿಲ್ಲ. ಆದರೆ ಹಿಂದಿನ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸದೇ ಇದ್ದುದರ ಪರಿಣಾಮವಾಗಿ ತೈಲನಿಧಿಯ ಕೊರತೆ ಪ್ರಮಾಣ ರೂ. 12,500 ಕೋಟಿ ಮೀರಿತ್ತು. ಆದ್ದರಿಂದ ಅದನ್ನು ಸರಿದೂಗಿಸಲು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸಬೇಕಾಯಿತು ಎಂದು ಪ್ರಧಾನಿ ವಿವರಣೆ ನೀಡಿದರು.

ADVERTISEMENT

ಆದರೆ ಈಗ ಮತ್ತೆ ಪೆಟ್ರೋಲಿಯಂ ಬೆಲೆ ಹೆಚ್ಚಿಸುವ ಇಂಗಿತ ವ್ಯಕ್ತಪಡಿಸಿದ್ದೇನೆ ಎಂದು ಕೆಲವು ಪತ್ರಿಕೆಗಳಲ್ಲಿ ವರದಿಯಾಗಿರುವುದು ಸರಿಯಲ್ಲ ಎಂದೂ ಅವರು ನುಡಿದರು.

ರಾಮನಗರಕ್ಕೆ ಅಂಬರೀಷ್‌ ದಳದ ಅಭ್ಯರ್ಥಿ

ಬೆಂಗಳೂರು, ಜ. 13– ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಫೆ.6‌ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ನಟ ಅಂಬರೀಷ್‌ ಅವರು ಜನತಾದಳದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಸರ್ವ ಸಮ್ಮತ ಅಭ್ಯರ್ಥಿಯ ಆಯ್ಕೆಗಾಗಿ ದಳದ ಸ್ಥಳೀಯ ಮುಖಂಡರು ಇಂದುಲೋಕಸಭಾ ಸದಸ್ಯ ಎಚ್‌.ಡಿ.ಕುಮಾರಸ್ವಾಮಿ ಅವರ ಬಿಡದಿ ಬಳಿಯ ತೋಟದ ಮನೆಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು. ಅಂಬರೀಷ್‌ಗೆ ಟಿಕೆಟ್‌ ನೀಡುವುದಕ್ಕೆ ಹೆಚ್ಚಿನ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. ನಂತರ ಸಭೆ ಈ ವಿಚಾರದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದು, ಅಂಬರೀಷ್‌ ಅವರೂ ಈ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.