ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ 8–4–1972

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 19:30 IST
Last Updated 7 ಏಪ್ರಿಲ್ 2022, 19:30 IST
   

ಪೊಲೀಸ್ ವರ್ತನೆ ಹತೋಟಿ ಬಗ್ಗೆ ಸರ್ಕಾರದ ಭರವಸೆ

ಬೆಂಗಳೂರು, ಏ. 7– ಬೆಂಗಳೂರಿನ ಎಸ್‌.ಜಿ.ಇ.ಎಫ್ ನಲ್ಲಿ ನಿನ್ನೆ ಮತ್ತು ಮೊನ್ನೆ ನಡೆದ ಘಟನೆಗಳ ಸಂಬಂಧದಲ್ಲಿ ವಿಧಾನಸಭೆಯಲ್ಲಿ ಇಂದು ಬಿರುಸು ವಾತಾವರಣವನ್ನು ಎದುರಿಸಿದ ಸರ್ಕಾರ ಇನ್ನು ಮುಂದೆ ಪೊಲೀಸರ ವರ್ತೆನೆಯ ಮೇಲೆ ಸಂಯಮದ ಬಿಗಿಹಾಕುವ ಭರವಸೆಯನ್ನು ಶಾಸಕರಿಗೆ ನೀಡಿತು.

ಮುಂದೆ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಮೇಲೆ ಬಲಪ್ರಯೋಗಿಸುವ ಪ್ರಸಂಗಗಳು ಬಂದಾಗ ದೀರ್ಘ ಆಲೋಚನೆ ಮಾಡದೇ ಈ ಕೆಲಸಕ್ಕೆ ಪೊಲೀಸರು ಕೈಹಾಕರು. ಇದು ಸರ್ಕಾರದ ನೀತಿಯಾಗಿದೆ‘ ಎಂದು ಘಟನೆಗಳ ಬಗ್ಗೆ ಸದನದ ಕಳವಳವನ್ನು ಪ್ರತಿಧ್ವನಿಸಿದ ಕೈಗಾರಿಕಾ ಮಂತ್ರಿ ಎಸ್‌.ಎಂ. ಕೃಷ್ಣ ಅವರು ಹೇಳಿದರು.

ADVERTISEMENT

‘ತೀವ್ರ ಕ್ರಮ’: ಎಂ.ಎಸ್. ಕೃಷ್ಣನ್, ಎಸ್. ಬಂಗಾರಪ್ಪ ಮತ್ತು ಟಿ.ಆರ್. ಶಾಮಣ್ಣ ಅವರು ಕಳುಹಿಸಿದ ಮೂರು ಪ್ರತ್ಯೇಕ ನಿಲುವಳಿ ಸೂಚನೆಗಳ ಅಂಗೀಕಾರದ ಸಂಬಂಧದಲ್ಲಿ ನಡೆದ ಸುಮಾರು 2 ಗಂಟೆಗಳ ಕಾಲದ ಚರ್ಚೆಯಲ್ಲಿ ಉದ್ರಿಕ್ತ ಸದಸ್ಯರೊಬ್ಬರಿಂದ ಸಭಾ ತ್ಯಾಗವೂ ನಡೆಯಿತು.

ಪೊಲೀಸರ ವರ್ತನೆ ಬಗ್ಗೆ ರೋಷದಿಂದ ಮಾತನಾಡಿದ ಸದಸ್ಯರನ್ನು ಸಮಾಧನ ಮಾಡಿದ ಕೃಷ್ಣ ಅವರು ‘ಪೊಲೀಸರು ಎಲ್ಲೆಮೀರಿ ವರ್ತಿಸಿದ ಸಂಶಯ ಬಂದರೆ ಸರ್ಕಾ ಅವರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವುದು‘ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.