ಕಾರ್ಯಕಾರಿ ಸಮಿತಿ ಮುಂದೆ ಹಾಜರಿ– ಅರ್ಜುನ್ ಕೋರಿಕೆ
ನವದೆಹಲಿ, ಫೆ. 6 (ಪಿಟಿಐ)– ಶಿಸ್ತು ಉಲ್ಲಂಘನೆ ಆರೋಪ ಕುರಿತಂತೆ ತಮ್ಮ ವಿರುದ್ಧ ಅಂತಿಮ ನಿರ್ಣಯ ಕೈಗೊಳ್ಳುವ ಮುನ್ನ ಪಕ್ಷದ ಕಾರ್ಯಕಾರಿ ಸಮಿತಿ ಮುಂದೆ ಖುದ್ದಾಗಿ ವಿವರಣೆ ನೀಡಲು ಅವಕಾಶ ನೀಡಬೇಕು ಎಂದು ಪಕ್ಷದಿಂದ ಅಮಾನತುಗೊಂಡಿರುವ ಕೇಂದ್ರದ ಮಾಜಿ ಸಚಿವ ಅರ್ಜುನ್ ಸಿಂಗ್ ಅವರು ಎಐಸಿಸಿ ಅಧ್ಯಕ್ಷ ಪಿ.ವಿ. ನರಸಿಂಹ ರಾವ್ ಅವರನ್ನು ಕೋರಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಗಾಗಿ ಸಂಘಟನೆಯಿಂದ ತಮ್ಮನ್ನು ಯಾಕೆ ಹೊರಹಾಕಬಾರದು ಎಂದು ಕೇಳಿ ಎಐಸಿಸಿ ನೀಡಿರುವ ನೋಟಿಸಿಗೆ ಇಂದು ಸುದೀರ್ಘ ಉತ್ತರ ನೀಡಿರುವ ಅರ್ಜುನ್ ಸಿಂಗ್, ಪಕ್ಷ ವಿರೋಧಿ ಚಟುವಟಿಕೆ ಆರೋಪವನ್ನು ನಿರಾಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ
ಬೆಂಗಳೂರು, ಫೆ. 6– ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಸೂಚನೆಗಳಿಗೆ ಅನುಸಾರವಾಗಿ ಮುಂದಿನ ಶೈಕ್ಷಣಿಕ ಸಾಲಿನಿಂದ ಮೀಸಲಾತಿ ನೀತಿಯನ್ನು ಜಾರಿಗೆ ತರಲಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಬದಲಾವಣೆಯಿಂದಾಗಿ ಹಿಂದುಳಿದ ವರ್ಗಗಳ ಕಾಯಂ ಆಯೋಗದ ಅಧ್ಯಕ್ಷ ಎನ್.ಆರ್. ಕುದೂರ್ ಅವರಿಗೆ ರಾಜೀನಾಮೆ ಸಲ್ಲಿಸಲು ಸೂಚಿಸಿದೆ.
ಸರ್ಕಾರದ ಇತರ ನಿಗಮ ಮಂಡಲಿಗಳ ಅಧ್ಯಕ್ಷರುಗಳಿಗೆ ಸೂಚಿಸಿದ ರೀತಿಯಲ್ಲಿ ನ್ಯಾಯಮೂರ್ತಿ ಕುದೂರ್ ಅವರಿಗೂ ಸೂಚಿಸಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ರಮೇಶ್ ಜಿಗಜಿಣಗಿ ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.