ಅಜಿತ್, ಸಿಂಧಿಯಾ, ಬೂಟಾ, ಚಿದಂಬರಂ ಕೇಂದ್ರ ಸಂಪುಟಕ್ಕೆ
ನವದೆಹಲಿ, ಫೆ. 9 (ಪಿಟಿಐ, ಯುಎನ್ಐ)– ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಇಂದು ತಮ್ಮ ಸಂಪುಟವನ್ನು ವಿಸ್ತರಿಸಿ ಅಜಿತ್ ಸಿಂಗ್, ಬೂಟಾ ಸಿಂಗ್, ಮಾಧವ ರಾವ್ ಸಿಂಧಿಯಾ ಮತ್ತು ಪಿ.ಚಿದಂಬರಂ ಸೇರಿದಂತೆ ಆರು ಮಂದಿ ಸಚಿವರನ್ನು ಸೇರಿಸಿಕೊಂಡರು. ಅಜಿತ್, ಸಿಂಧಿಯಾ ಹಾಗೂ ಬೂಟಾ ಸಿಂಗ್ ಅವರು ಸಂಪುಟ ದರ್ಜೆ ಸಚಿವರಾಗಿದ್ದಾರೆ.
ಪಿ.ಚಿದಂಬರಂ ಅವರ ಹೊರತಾಗಿ ಊರ್ಮಿಳಾ ಬೆನ್ ಪಟೇಲ್ ಮತ್ತು ಮಾತಂಗ್ ಸಿಂಗ್ ಅವರನ್ನು ರಾಜ್ಯ ಸಚಿವರಾಗಿ ಸೇರಿಸಿಕೊಳ್ಳಲಾಗಿದೆ. ಈ ಆರೂ ಜನರು ಮಧ್ಯಾಹ್ನ ನಡೆದ ಸರಳ ಸಮಾರಂಭದಲ್ಲಿ ಸಚಿವರಾಗಿ
ಪ್ರಮಾಣ ವಚನ ಸ್ವೀಕರಿಸಿದರು.
ಐದು ವರ್ಷಗಳ ಭೂ ಹಗರಣಗಳು ಸಿಓಡಿ ತನಿಖೆಗೆ
ಬೆಂಗಳೂರು, ಫೆ. 9– ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಡೆದಿರುವ ಭೂ ಕಬಳಿಕೆ ಹಗರಣಗಳನ್ನು ಸಿ.ಓ.ಡಿ ತನಿಖೆಗೆ ಒಪ್ಪಿಸಲು ಸರ್ಕಾರ ನಿರ್ಧರಿಸಿದೆ.
ಭೂ ಖರೀದಿ ಹಾಗೂ ಖಾತೆ ಬದಲಾವಣೆ ಸೇರಿದಂತೆ ಎಲ್ಲಾ ಭೂ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಉದ್ದೇಶಿಸಲಾಗಿದೆ. ಸಿ.ಓ.ಡಿ. ಅಧಿಕಾರಿಗಳ ತನಿಖೆಗೆ ಅನುಕೂಲವಾಗುವಂತೆ ಹೆಚ್ಚುವರಿ ಕಾರ್ಯದರ್ಶಿಯ (ಕಂದಾಯ) ಎರವಲು ಸೇವೆ ನೀಡಲು ಕಂದಾಯ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನೂ ಕಲ್ಪಿಸಲು ಕಂದಾಯ ಸಚಿವ ಆರ್.ಎಲ್. ಜಾಲಪ್ಪನವರು ತೀರ್ಮಾನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.