ADVERTISEMENT

ಅಡಿಕೆ ಬೆಳೆಗಾರರ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

“ಅಡಿಕೆಗೇಕೆ ಪರಿಹಾರ”? ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಪತ್ರ ಓದಿದೆ. ಅಡಿಕೆ ಬೆಳೆಗಾರರೆಲ್ಲರೂ ಶ್ರೀಮಂತರು, ರಾಜಕಾರಣಿಗಳು ಎಂದು ಅವರು ಬರೆದಿದ್ದಾರೆ. ನಿಜಕ್ಕೂ ಅಡಿಕೆ ಬೆಳೆಗಾರರ ಬಡತನ ಎಂತದ್ದು ಎನ್ನುವುದನ್ನು ಮಲೆನಾಡಿನ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಮುಂತಾದ ತಾಲ್ಲೂಕುಗಳ ಕುಗ್ರಾಮಗಳಿಗೆ ಹೋಗಿ ತಿಳಿಯಬೇಕು.

ಮಲೆನಾಡಿನ ಹಳ್ಳಿಗಳಲ್ಲಿ ವಾಸವಾಗಿರುವ ಅಡಿಕೆ ಬೆಳೆಗಾರರಲ್ಲಿ ಬಹುತೇಕರು ಒಂದೋ ಎರಡೋ ಎಕರೆ ತೋಟವುಳ್ಳಂಥವರು. ಅಡಿಕೆಯೇ ಅವರಿಗೆ ಜೀವನಾಧಾರ. ಅಲ್ಲಿನ ಅಡಿಕೆ ತೋಟಗಳಿಗೆ ಹಳದಿ ಎಲೆರೋಗ, ಬೇರು ಹುಳಗಳ ಬಾಧೆ, ತುಂಡೆರೋಗ ಮುಂತಾದವು ದಿನೇ ದಿನೇ ವ್ಯಾಪಕವಾಗಿ ಹಬ್ಬುತ್ತಾ ನೂರಾರು ಎಕರೆ ಅಡಿಕೆ ತೋಟಗಳು ನಾಶವಾಗುತ್ತಿವೆ. ಇದರ ಜೊತೆಗೆ ಕೂಲಿಕಾರರ ಸಮಸ್ಯೆ, ಗುಟ್ಕಾ ನಿಷೇಧ, ಮಧ್ಯವರ್ತಿಗಳ ಶೋಷಣೆ, ಸಾಲಬಾಧೆ ಇವೆಲ್ಲವುಗಳಿಂದ ಅಡಿಕೆ ಬೆಳೆಗಾರ ಇಂದು ಕಂಗಾಲಾಗಿದ್ದಾನೆ.

ಆಗಿನ ತೋಟಗಾರಿಕಾ ಆಯುಕ್ತರಾಗಿದ್ದ ಗೋರಖ್‌ಸಿಂಗ್‌ರವರು ಇಲ್ಲಿ ಬಂದು ಸಮೀಕ್ಷೆ ನಡೆಸಿ ಅಡಿಕೆ ಬೆಳೆಗಾರರ ಸಂಕಷ್ಟಗಳನ್ನು ಕಣ್ಣಾರೆ ಕಂಡುಕೊಂಡೇ ವಸ್ತುನಿಷ್ಠವಾದ ವರದಿ ಸಲ್ಲಿಸಿದ್ದಾರೆ. ಈ ವರದಿ ಜಾರಿಗೆ ಬರದೇ, ಅಡಿಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ಸಿಗದಿದ್ದರೆ ಮುಂದೊಂದು ದಿನ ಅಡಿಕೆ ಬೆಳೆಗಾರರು ಸಾಮೂಹಿಕ ಆತ್ಮಹತ್ಯೆಯತ್ತ ಸಾಗಿದರೆ ಅಚ್ಚರಿ ಏನಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.