ಈಚೆಗೆ ದೆಹಲಿಯಲ್ಲಿ ಪ್ರಧಾನಿ ಮನ್ಮೋಹನ್ ಸಿಂಗ್ ಅವರು ಉದ್ಘಾಟಿಸಿದ ಮುಖ್ಯಮಂತ್ರಿಗಳ ಮತ್ತು ರಾಜ್ಯದ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದಲ್ಲಿ ಕೇಂದ್ರ ಕಾನೂನು ಸಚಿವ ಅಶ್ವನಿಕುಮಾರ್ ಅವರು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು ಸುಮಾರು ಮೂರು ಕೋಟಿ ಎಂದು ಹೇಳಿ ಅಚ್ಚರಿಗೊಳಿಸಿದರು.
ನ್ಯಾಯ ನಿರ್ಣಯ ತುಂಬ ತಡವಾದರೆ ನ್ಯಾಯ ನಿರಾಕರಿಸಿದಂತೆ ಎಂದು ತಿಳಿಯಲಾಗುತ್ತದೆ. ನ್ಯಾಯಾಲಯದ ತೀರ್ಪು ತಡವಾಗಲು ಸರ್ಕಾರ, ವಕೀಲರು ಹಾಗೂ ಕಕ್ಷಿದಾರರು ಕಾರಣ ಎಂದು ಹೇಳಲಾಗುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನ್ಯಾಯಾಂಗ ಸ್ವತಂತ್ರವಾದ ಪ್ರಮುಖ ಅಂಗವಾಗಿದೆ. ಪ್ರಜೆಗಳಿಗೆ ನ್ಯಾಯ ಶೀಘ್ರವಾಗಿ ಹಾಗೂ ಅವರ ಆರ್ಥಿಕ ಮಿತಿಯೊಳಗೆ, ದುಬಾರಿಯಾಗದೆ ದೊರೆಯಬೇಕು.
ಸಮಾವೇಶದಲ್ಲಿ ಪಾಲ್ಗೊಂಡ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜ್ಯದಲ್ಲಿ ಸ್ಥಾಪಿಸಲಾದ 166 ತ್ವರಿತ ನ್ಯಾಯಾಲಯಗಳು ನಾಲ್ಕು ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿವೆ ಎಂದು ತಿಳಿಸಿದರು. ಎಲ್ಲ ರಾಜ್ಯಗಳಲ್ಲಿ ತ್ವರಿತ ನ್ಯಾಯಾಲಯಗಳು ಸ್ಥಾಪನೆಯಾಗಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಬೇಕು. ಪ್ರಕರಣಗಳು ಬೇಗ ಇತ್ಯರ್ಥಗೊಳ್ಳಬೇಕು.
- ಸದಾನಂದ ಹೆಗಡೆಕಟ್ಟೆ
ಮೂಡುಬಿದಿರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.