ADVERTISEMENT

ಉತ್ತರ ಕರ್ನಾಟಕ ಮರೆಯದಿರಲಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ಉತ್ತರ ಕರ್ನಾಟಕದ ವ್ಯಕ್ತಿ, ಅದರಲ್ಲೂ ಸಜ್ಜನ ವ್ಯಕ್ತಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆದದ್ದು ಉತ್ತರ ಕರ್ನಾಟಕದವರಾದ ನಮಗೆಲ್ಲ ಆನೆ ಬಲ ತಂದಿದೆ. ಇನ್ನಾದರೂ ಉತ್ತರ ಕರ್ನಾಟಕ ಹಲವಾರು ದಶಕಗಳಿಂದ ಅನುಭವಿಸುತ್ತಿರುವ ಮಲತಾಯಿ ಧೋರಣೆ ದೂರವಾಗಬಹುದೇನೋ ಎಂಬ ಆಶಾವಾದ ನಮ್ಮದು. ಬೆಂಗಳೂರು ಕೇಂದ್ರೀಕೃತ ಅಭಿವೃದ್ಧಿಯನ್ನು ಬಿಟ್ಟು ಉತ್ತರ ಕರ್ನಾಟಕದ ಹಲವಾರು ಜ್ವಲಂತ ಸಮಸ್ಯೆಗಳ ಬಗ್ಗೆ ಜಗದೀಶ ಶೆಟ್ಟರ್ ಗಮನ ನೀಡಲಿ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಉತ್ತರ ಕರ್ನಾಟಕದ ಕೊಡುಗೆ ಬಹಳಷ್ಟಿದೆ. ಇವತ್ತು ಉತ್ತರ ಕರ್ನಾಟಕ ಅನಾವೃಷ್ಟಿಯಿಂದಾಗಿ ಹಿಂದೆಂದೂ ಕಂಡರಿಯದಂತ ಬರಗಾಲಕ್ಕೆ ತುತ್ತಾಗಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಬರ ಪರಿಹಾರ ಕಾರ್ಯ ಕೈಗೊಳ್ಳುತ್ತಿದ್ದರೂ, ಸಿಬ್ಬಂದಿ ಕೊರತೆ ಮುಂತಾದ ಸಮಸ್ಯೆಗಳಿಂದಾಗಿ ಪರಿಹಾರ ಕೆಲಸದಲ್ಲಿ  ವ್ಯತ್ಯಯ ಉಂಟಾಗುತ್ತಿದೆ.

ಆದ್ದರಿಂದ ಜಗದೀಶ ಶೆಟ್ಟರ್ ಬರ ಪರಿಹಾರದ ಕುರಿತು ಮೊದಲು ಗಮನ ಹರಿಸಲಿ. ಬರ ಸಮಸ್ಯೆ ನೀಗುವವರೆಗೆ ಆಡಳಿತ ಯಂತ್ರ ಬೆಂಗಳೂರನ್ನು ಬಿಟ್ಟು ಉತ್ತರ ಕರ್ನಾಟಕದ ಕಡೆಗೆ ನೆಲೆ ನಿಲ್ಲಲಿ. ಇನ್ನಾದರೂ ಜಾತಿ ರಾಜಕಾರಣ ಕೊನೆಯಾಗಿ ಇರುವ ಒಂದು ವರ್ಷ ಅಭಿವೃದ್ದಿ ರಾಜಕಾರಣ ನಡೆಸಲಿ. ಉತ್ತರ ಕರ್ನಾಟಕದ ಜನ ಇಂದಿಗೂ ಎಸ್.ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಮುಂತಾದವರನ್ನು ನೆನೆಸುತ್ತಾರೆ. ಆ ಪರಂಪರೆಯಲ್ಲಿ ಜಗದೀಶ ಶೆಟ್ಟರ್ ಹೆಸರು ಸೇರಲಿ ಎಂಬುದು ನಮ್ಮ ಅಭಿಲಾಷೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.