`ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ~ ಎಂದೇ ಖ್ಯಾತಳಾದ ಕಿತ್ತೂರ ರಾಣಿ ಚನ್ನಮ್ಮನ ಪರಾಕ್ರಮದ ಪರಿಚಯಕ್ಕಾಗಿ ಕಿತ್ತೂರಿನಲ್ಲಿ ಪ್ರತಿವರ್ಷ ವಿಜಯೋತ್ಸವವನ್ನೇನೋ ನಾವಿಂದು ಆಚರಿಸುತ್ತಿದ್ದೇವೆ. ಈ ಉತ್ಸವಕ್ಕೆ ಸರ್ಕಾರದಿಂದ ಹಣ ಬರುತ್ತಿದೆ. ಆದರೆ ಮಿತಿಮೀರಿದ ಆಡಂಬರ ಸರಿಯೇ? ಎಂಬುದನ್ನೂ ಸಹ ನಾವು ಆಲೋಚಿಸಬೇಕಾಗಿದೆ.
ಸರ್ಕಾರದಿಂದ ಇನ್ನೂ ಹೆಚ್ಚಿನ ಹಣ ಬರಲಿ, ಅದನ್ನು ಕೋಟೆಯ ಹಾಗೂ ಊರಿನ ಅಭಿವೃದ್ಧಿಗೆ ತೊಡಗಿಸಿದರೆ ಉತ್ತಮ ಅಲ್ಲವೇ? ಉತ್ಸವ ನೋಡಲು ದೂರ-ದೂರದಿಂದ ಬಂದ ಜನರು ಅದೇ ಭಗ್ನ ಕೋಟೆಯನ್ನು ನೋಡಿ `ಈ ಕೋಟೆಯನ್ನು ಆಂಗ್ಲರು ಹಾಳು ಮಾಡಿದ್ದಾರೆ, ಕೋಟೆಯೊಳಗಿನ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದಾರೆ~. ಎಂದು ಮಾತನಾಡಿಕೊಳ್ಳುವುದು ಸಾಮಾನ್ಯ. ಅಂದರೆ ನಾವು ಈ ಹಾಳಾದ ಕೋಟೆಯನ್ನು ಪ್ರದರ್ಶಿಸಿ ಆಂಗ್ಲರ ಶೂರತನವನ್ನೇ ಪ್ರಚಾರ ಮಾಡುತ್ತಿದ್ದೆೀವೆ ಎನಿಸುತ್ತಿದೆ. ಎಷ್ಟು ದಿನ ಹೀಗೆಯೇ ಮಾಡುವುದು? ಹೊರರಾಜ್ಯಗಳಿಂದ ಗಾಯಕರು ಹಾಗೂ ಕಲಾತಂಡಗಳನ್ನು ತರಿಸಿ ಅವರಿಗೆ ಲಕ್ಷಾಂತರ ಹಣ ಖರ್ಚು ಮಾಡಿ ಉತ್ಸವಕ್ಕೆ ಸಂಬಂಧವೇ ಇಲ್ಲದ ಹಾಡು ಹಾಡಿಸಿ ಕೇಳಿ ಕುಣಿದು ಕುಪ್ಪಳಿಸುತ್ತೇವೆ. ನಮ್ಮ ನಾಡಿನಲ್ಲೇ ಸಾಕಷ್ಟು ಜನಪದ ಕಲೆಗಳು, ಕಲಾಕಾರರೂ ಇರುವಾಗ ಈ ದುಂದುವೆಚ್ಚವೇಕೆ? ಇದೇ ಹಣದಿಂದ ಕೋಟೆಯನ್ನು ಅಂದವಾಗಿಸುವ ಯೋಜನೆ ರೂಪಿಸಿದರೆ ಅಂದಿನ ಕೋಟೆ ವೈಭವವನ್ನು ಇವತ್ತು ಕಣ್ಣಾರೆ ನೋಡಬಹುದಲ್ಲವೆ?
ಆದ್ದರಿಂದ ಮೂರು ದಿನ `ಉತ್ಸವ~ ಬರೀ ಆಡಂಬರದ ಜಾತ್ರೆ~ಯಾಗದಿರಲಿ. ಆಗಲೇ ನಾಡತಾಯಿ ಚನ್ನಮ್ಮ ಹಾಗೂ ನಾಡಿಗಾಗಿ ಪ್ರಾಣತೆತ್ತ ಎಲ್ಲ ಮಹನೀಯರ ಆತ್ಮಕ್ಕೆ ಶಾಂತಿ ಸಿಗುವಂತಾಗುತ್ತದೆ. ನೀರಿನಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲಿಗೆ ನಾಡಿನ ಅಭಿವೃದ್ಧಿಯ ಹಬ್ಬವಾಗುವಂತೆ ಅರ್ಥಪೂರ್ಣವಾಗಿ ಆಚರಣೆ ಮಾಡುವ ಬಗೆಗೆ ಸರ್ಕಾರ ಚಿಂತಿಸಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.