ADVERTISEMENT

ಗಮಕ ಅನಾಥ ಶಿಶುವೇ?

ಉಷಾ ಕಟ್ಟೆಮನೆ
Published 12 ಜೂನ್ 2018, 19:08 IST
Last Updated 12 ಜೂನ್ 2018, 19:08 IST

ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜೂನ್ 24 ರಿಂದ 26ರವರೆಗೆ ಶ್ರವಣಬೆಳಗೊಳದಲ್ಲಿ ಅಖಿಲ ಭಾರತ ಮಟ್ಟದ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಒಳ್ಳೆಯ ನಡೆ, ಆಗಬೇಕಾದ್ದೇ. ಆದರೆ ಈ ಸಮ್ಮೇಳನದಲ್ಲಿ ಗಮಕ ಪ್ರಕಾರವನ್ನು ಕಡೆಗಣಿಸಿದ್ದು ಯಾಕೆ?

ಹಳಗನ್ನಡ ಸಮ್ಮೇಳನ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಲೇ, ಕರ್ನಾಟಕ ಗಮಕ ಕಲಾಪರಿಷತ್ತು, ಸಮ್ಮೇಳನದ ರೂವಾರಿಗಳನ್ನು ಸಂಪರ್ಕಿಸಿತ್ತು. ‘ಗಮಕ ಕಲೆಯ ಬಗ್ಗೆ ಒಂದು ಗೋಷ್ಠಿ ಹಾಗೂ ಗಮಕ ವಾಚನಕ್ಕೆ ಅವಕಾಶವನ್ನು ಕೊಡಬೇಕು’ ಎಂದು ಮನವಿಯನ್ನೂ ಅರ್ಪಿಸಿತ್ತು. ಆದರೆ ಸಾಹಿತ್ಯ ಪರಿಷತ್ತು ಈ ಬಗ್ಗೆ ನಿರ್ಲಕ್ಷ್ಯ ತಾಳಿತು. ಸಮ್ಮೇಳನದ ಕವಿಗೋಷ್ಠಿಯಲ್ಲಿ 16 ಕವಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅವರೆಲ್ಲಾ ಹಳಗನ್ನಡದಲ್ಲಿ ಕಾವ್ಯ ಓದುತ್ತಾರೇನು? ಅಲ್ಲಿ ಪ್ರದರ್ಶನವಾಗಲಿರುವ ನಾಟಕ ಹಳಗನ್ನಡದಲ್ಲಿ ಇದೆಯೇನು? ಇವರೆಲ್ಲರ ದೃಷ್ಟಿಯಲ್ಲಿ ಗಮಕ ಕಲೆ ಅನಾಥ ಶಿಶುವೇ?

ಹಳಗನ್ನಡ ಸಾಹಿತ್ಯವನ್ನು ಅನಕ್ಷರಸ್ಥರ ಬಳಿಗೆ ಒಯ್ದದ್ದು ಗಮಕ ರೂಪಕಗಳಲ್ಲವೇ? ಹಳಗನ್ನಡ ಇಂದು ಜೀವಂತವಾಗಿರುವುದು ಗಮಕ ರೂಪಕಗಳು ಮತ್ತು ಯಕ್ಷಗಾನ ಹಾಡುಗಳಂಥ ಕಲಾ ಪ್ರಕಾರಗಳಲ್ಲಿಯೇ ಹೊರತು ಅಕಾಡೆಮಿಕ್ ಭಾಷಣಗಳಲ್ಲಿ ಅಲ್ಲ.

ADVERTISEMENT

ಗಮಕ ಜನಸಾಮಾನ್ಯರ ನಡುವೆ ಜೀವಂತವಾಗಿರುವ ಹಳಗನ್ನಡದ ಕೊಂಡಿ. ಭಾಷೆ– ಸಾಹಿತ್ಯಗಳು ಅಕಾಡೆಮಿಕ್ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗದೆ ಆಸಕ್ತ ಜನಸಾಮಾನ್ಯರನ್ನೂ ತಲುಪಬೇಕು. ಅದಕ್ಕೆ ಜನಪ್ರಿಯ ಕಲೆಗಳನ್ನು ವಾಹಕವಾಗಿ ಬಳಸಿಕೊಳ್ಳಬೇಕು. ಅಂತಹ ವಾಹಕವಾಗುವ ಎಲ್ಲಾ ಶಕ್ತಿ ಗಮಕ ಕಲೆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.