ADVERTISEMENT

ಜಾತಿ ವಿನಾಶ: ಜನ ಚಿಂತಿಸಲಿ

ಗೌರಿಬಿದನೂರು ರಂಗಪ್ಪ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ರಾಜ್ಯದಲ್ಲಿ ಈಚೆಗೆ ಕೆಲವು  ವಿದ್ಯಮಾನಗಳು  ವಿಚಿತ್ರ ರೀತಿಯಲ್ಲಿ  ಸಾಗುತ್ತಿವೆ. ಜಾತಿ ವಿನಾಶ, ಜಾತಿ ವಿನಾಶ ಎಂದು ಸರ್ಕಾರವೇ ಮುಂತಾಗಿ ಮುಖಂಡರು, ಮರಿಮುಖಂಡರು, ಸಾಹಿತಿ, ಪ್ರೊಫೆಸರುಗಳು ಒಂದು ಕಡೆ ದೊಡ್ಡ ಹುಯಿಲನ್ನೇ ಎಬ್ಬಿಸುತ್ತಿದ್ದರೆ ಇನ್ನೊಂದು ಕಡೆ ಎಗ್ಗಿಲ್ಲದೆ ಒಂದಲ್ಲ ಒಂದು ಜಾತಿ ಸಮ್ಮೇಳನ ಬೃಹತ್‌ ಮಟ್ಟದಲ್ಲಿ ಏರ್ಪಾಟಾಗುತ್ತಾ ಇವರು ಅಲ್ಲೂ ಪ್ರತ್ಯಕ್ಷವಾಗಿ ಆಯಾ ಜಾತಿಗಳು ಬಲವರ್ಧನೆ ಆಗಬೇಕೆಂದು ಭಾಷಣಗಳನ್ನು ಬಿಗಿಯುತ್ತಿದ್ದಾರೆ.

ಸಾಮಾನ್ಯ ಜನ ನೆಂಟರ ಮನೆಗೋ, ಪುಣ್ಯ ಕ್ಷೇತ್ರಕ್ಕೋ ಹೋಗಲು ಇಕ್ಕಟ್ಟಿನ ಜೀವನದಲ್ಲಿ ಹಣಕಾಸು ಮುಗ್ಗಟ್ಟು, ರಜೆ, ಆರೋಗ್ಯ ಏರುಪೇರು ಇತ್ಯಾದಿ ಸೇರಿ ಒದ್ದಾಡುತ್ತಾರೆ, ಸಾಧ್ಯವಾಗದೆ ಹಲವು ಬಾರಿ ಸುಮ್ಮನಾಗು­ತ್ತಾರೆ. ಆದರೆ ಈ  ಜಾತಿ ಸಮ್ಮೇಳನಗಳಿಗೆ ಜನರು ಕಿಕ್ಕಿರಿದು ಸೇರುವಂತೆ ಕಪ್ಪು ಹಣದ ಹೊಳೆಯನ್ನೇ ಹರಿಸುತ್ತಾರೆ.  ಅಷ್ಟೇ ಅಲ್ಲ, ಜಾತಿ–ಜಾತಿಗಳ ನಡುವೆ ಸಂಘರ್ಷಕ್ಕೆ ಪ್ರೋತ್ಸಾಹಿಸುವಂತೆ ಭಾಷಣಗಳನ್ನು ಬಿಗಿದು ಪತ್ರಿಕೆಗಳಲ್ಲಿ ವಿರಾಜಿ­ಸುತ್ತಾರೆ. ಇದೊಂದು ಇಂದ್ರಜಾಲದಂತೆ ಇದೆ.

ಅಂದರೆ ಕೆಳ ಕೆಳಗೆ ಇಳಿಯುತ್ತಿದ್ದಂತೆಲ್ಲ ಮೇಲೆ ಮೇಲೆ ಸಾಗುತ್ತಿದ್ದೇವೆ ಎಂಬ ಭ್ರಮೆ. ಇದಕ್ಕೆಲ್ಲ ಬೆರಳೆಣಿಕೆಯಷ್ಟಾದರೂ ಕೆಲ ಬಲಿಷ್ಠ ಮಠಾಧಿಪತಿಗಳೂ ಕೈಜೋಡಿಸುತ್ತಾರೆ. ತಮ್ಮ ಜಾತಿಯನ್ನು ಮೆರೆಸುವ ಆಸೆಗೆ, ಬೊಕ್ಕಸದ ಹಣದ ಸಿಂಹಪಾಲಿನ ಆಸೆಗೆ, ಸರ್ಕಾರಿ ಸವಲತ್ತುಗಳ ನಿರಂತರ ಮುಂದುವರಿಕೆ ಆಸೆಗಾಗಿ ಅಸ್ಪೃಶ್ಯತೆ, ತುಳಿತ, ಶೋಷಣೆ ಮುಂತಾ­ದವು­ಗಳನ್ನು ಇರುವುದಕ್ಕಿಂತ ಹೆಚ್ಚಾಗಿ ವೈಭವೀಕರಿಸಿ ವಿಷಯವನ್ನು ಜೀವಂತವಾಗಿರಿಸುತ್ತಾರೆ. ಜನ ಈ ಬಗ್ಗೆ ಚಿಂತಿಸಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.