ಚುನಾವಣೆ ಸಮೀಪಿಸುತ್ತಿರುವಾಗ ಕರ್ನಾಟಕ ಸರ್ಕಾರವು ಹಲವು ಉಡುಗೊರೆಗಳನ್ನು ಕೊಡುತ್ತಿರುವುದರ ಉದ್ದೇಶ ವೇದ್ಯವಾಗಿದೆ. ಸರ್ಕಾರಿ ನೌಕರರ ವೇತನ ಶೇ 30ರಷ್ಟು ಏರಿಕೆಯಾಗಿದೆ. ಕರ್ನಾಟಕ ವಿದ್ಯುತ್ ಮಂಡಳಿ ಕೂಡ ನೌಕರರಿಗೆ ಶೇ 26ರ ವೇತನ ಹೆಚ್ಚಳ ಜಾರಿ ಮಾಡಿದೆ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆ.ಎಸ್.ಆರ್.ಟಿ.ಸಿ.) ನೌಕರರು ಎಂದಿನಂತೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ.
ತಮಗೆ ನಿವೃತ್ತಿವೇತನದ ಸೌಲಭ್ಯ ಕೊಡುವಂತೆ ಚಾಲಕರು, ನಿರ್ವಾಹಕರು, ಗ್ಯಾರೇಜ್ ನೌಕರರು ಹಾಗೂ ಇತರ ಸಿಬ್ಬಂದಿ ಹತ್ತಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಅವರ ಕೂಗು ಸರ್ಕಾರದ ಕಿವಿಗೆ ಕೇಳಿಸುತ್ತಿಲ್ಲ.
ನಮ್ಮ ಇಲಾಖೆಯನ್ನು ಸರ್ಕಾರವೇ ನಿರ್ವಹಿಸುತ್ತದೆ. ಸರ್ಕಾರಿ ಎಲ್ಲಾ ಬಾಬ್ತುಗಳನ್ನು ಹೊಂದಿದ್ದರೂ ಇದಕ್ಕೆ ‘ನಿಗಮ’ ಎಂಬ ಹಣೆಪಟ್ಟಿ ಹಚ್ಚಿ, ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಸಿಗದಂತೆ ಮಾಡಿದ್ದಾರೆ. ನಿಯಮಾವಳಿ ಉಲ್ಲಂಘನೆಯ ನೆಪದಲ್ಲಿ ಆಗಾಗ ನೌಕರರನ್ನು ಅಮಾನತು ಮಾಡಲಾಗುತ್ತದೆ. 1.20 ಲಕ್ಷ ನೌಕರರಿರುವ ಈ ವಿಭಾಗವನ್ನು ನಿವೃತ್ತಿ ವೇತನದ ಸೌಲಭ್ಯಕ್ಕೆ ಒಳಪಡಿಸಬೇಕೆಂಬುದು ನಮ್ಮ ಒತ್ತಾಯ.
ನಾಡಿನ ಜನರಿಗೆ ಹಲವು ಭಾಗ್ಯಗಳನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾರಿಗೆ ಸಂಸ್ಥೆಯ ಸಿಬ್ಬಂದಿಗೂ ‘ನಿವೃತ್ತಿನೇತನ ಭಾಗ್ಯ’ವನ್ನು ನೀಡಿ ನಮ್ಮ ಕುಟುಂಬಗಳಲ್ಲಿ ಬೆಳಕು ಕಾಣುವಂತೆ ಮಾಡಲಿ.
ಎಂ.ಜಿ. ಷಹಜಹಾನ್, ಭದ್ರಾವತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.