ADVERTISEMENT

ಪಠ್ಯದ ಪರಿಷ್ಕರಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‍ಸಿಇಆರ್‌ಟಿ) ಪಠ್ಯಕ್ರಮವನ್ನು ಹಗುರಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಕೇಂದ್ರ ಸರ್ಕಾರದ ಚಿಂತನೆ ಸ್ವಾಗತಾರ್ಹ. ಈಗಿನ ಶಾಲಾ ಪಠ್ಯಕ್ರಮ ಕೇವಲ ಪರೀಕ್ಷೆ ಓದಿಗಾಗಿ ಸೀಮಿತವಾಗಿದೆ. ವ್ಯಾವಹಾರಿಕ ಜಗತ್ತಿನಲ್ಲಿ ಅದಕ್ಕೆ ಯಾವುದೇ ಬೆಲೆ ಇಲ್ಲ. ಮಕ್ಕಳ ಕುತೂಹಲ ತಣಿಸಲು ಡಿಜಿಟಲ್‌ ಜಗತ್ತು ಸದಾ ಸಿದ್ಧವಾಗಿದೆ. ಹೀಗಾಗಿ ಶಾಲಾ ಪಾಠಗಳು ಕೇವಲ ಯಾಂತ್ರಿಕ ವಿಧಿವಿಧಾನಗಳಾಗಿವೆ.

‘ಮನ್‌ ಕಿ ಬಾತ್‌’ ವ್ಯಕ್ತಪಡಿಸಲು ಬೇಕಾಗುವ ಮಾತೃಭಾಷೆ ವಿವಾದದ ವಿಷಯವಾಗಿದೆ. ಈ ‘ದುನಿಯಾ’ದಲ್ಲಿ ಬದುಕಲು ಬೇಕಾಗುವ ಸಂಪರ್ಕ ಭಾಷೆಗಳು ವ್ಯಕ್ತಿ ಪ್ರತಿಷ್ಠೆಯ ಸಂಕೇತಗಳಾಗಿವೆ. ಅಡಳಿತ ಹಾಗೂ ವ್ಯವಹಾರಕ್ಕಾಗಿ ಕಲಿಯಬೇಕಾದ ಇಂಗ್ಲಿಷ್‌ ಭಾಷೆಯು ಸಾಮಾನ್ಯರಿಗೆ ಗಗನಕುಸುಮವಾಗಿದೆ.

ನಿತ್ಯ ವ್ಯವಹಾರಕ್ಕಾಗಿ ಬೇಕಾಗುವ ಗಣಿತ ಕಬ್ಬಿಣದ ಕಡಲೆಯಾಗಿದೆ. ನಿಸರ್ಗದ ವೈಚಿತ್ರ್ಯಗಳನ್ನು ಅರ್ಥ ಮಾಡಿಕೊಳ್ಳಲು ಬೇಕಾದ ವಿಜ್ಞಾನ ಕೇವಲ ಪ್ರಶ್ನೋತ್ತರವಾಗಿದೆ. ಒಳ್ಳೆಯ ನಾಗರಿಕರಾಗಿ ಬದುಕಲು ಬೇಕಾದ ಸಮಾಜ ವಿಜ್ಞಾನವು ಒಂದು ಆದರ್ಶ ಸಮಾಜದ ಮರೀಚಿಕೆಯಾಗಿದೆ. ಹಾಗಾಗಿ ಪಠ್ಯಕ್ರಮ ಕಾಲಚಕ್ರಕ್ಕೆ ಸಿಲುಕಿ ಬದಲಾವಣೆ ಕಾಣಬೇಕಾದುದು ಅಗತ್ಯ.

ADVERTISEMENT

– ಕೆ. ಪ್ರಕಾಶ್‌, ಸೀಗೋಡು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.