ಅಣ್ಣಾ ಹಜಾರೆಯವರು ಸಂಸತ್ಗಿಂತ ಹಿರಿಯರು (ಪ್ರ. ವಾ. ಅ. 10) ಎಂದು ಅವರ ಅನುಯಾಯಿಗಳಲ್ಲೊಬ್ಬರಾದ ಅರವಿಂದ ಕೇಜ್ರಿವಾಲ್ ಹೇಳಿರುವುದು ಪ್ರಶ್ನಾರ್ಹ.
ಯಾಕೆಂದರೆ ಇದು ಪ್ರಜಾಪ್ರತಿನಿಧಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಹೇಳಿಕೆಯಾಗಿದೆ. ಅಣ್ಣಾ ಅವರನ್ನು ಸಂಸತ್ತಿಗೆ ಯಾರು ಆಯ್ಕೆ ಮಾಡಿದ್ದಾರೆ? ಯಾವ ಪಕ್ಷ ಅವರನ್ನು ನಾಯಕರನ್ನಾಗಿ ಆರಿಸಿದೆ? ಇದನ್ನು ನಮ್ಮ ಸಂವಿಧಾನ ಅಂಗೀಕರಿಸುವುದೆ?
ಒಮ್ಮೆ ನಾವು ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಮೇಲೆ ಅದರ ಸರ್ವೋಚ್ಛ ನಾಯಕ ಬಹುಮತ ಹೊಂದಿರುವ ಪಕ್ಷದ ನಾಯಕನೇ. ಅವನು ಪ್ರಧಾನಿಯಾಗುತ್ತಾನೆ ಮತ್ತು ರಾಷ್ಟ್ರದ ಪ್ರಮುಖನೂ ಆಗಿರುತ್ತಾನೆ.
ಹೀಗಿದ್ದೂ ಪ್ರಜೆಗಳಿಂದ ಆಯ್ಕೆಯಾಗದೆ, ಆಡಳಿತ ಪಕ್ಷವನ್ನು ಸದಾ ಕಟಕಟೆಯಲ್ಲಿ ನಿಲ್ಲಿಸಿ ಮಾತನಾಡುವ, ಹಜಾರೆಯವರು ಹೇಗೆ ಸಂಸತ್ಗಿಂತ ಹಿರಿಯರಾದಾರು? ಆದ್ದರಿಂದ ಕೇಜ್ರಿವಾಲರ ಹೇಳಿಕೆ ಕೇವಲ ವ್ಯಕ್ತಿಪೂಜೆಗೆ ಅನುವು ಮಾಡಿಕೊಡುತ್ತದೆಯಲ್ಲವೆ? ಇದನ್ನು ಗಾಂಧೀವಾದಿ ಅಣ್ಣಾ ಅವರೂ ಒಪ್ಪಲಾರರು.
ಹಾಗೆಯೇ ಪ್ರಧಾನಿಯನ್ನು ಲೋಕಪಾಲ ಮಸೂದೆಯ ಕಕ್ಷೆಗೆ ಒಳಪಡಿಸಬೇಕೆಂಬುದೂ ಸಹ ನಮ್ಮ ಸಂವಿಧಾನಾತ್ಮಕ ವ್ಯವಸ್ಥೆಗೆ ಬಾಹಿರವಾದುದು ಎಂದೆನಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.