‘ಮಾದಿಗರು ಕೋಮುವಾದಿ ಪಕ್ಷದೊಂದಿಗೆ ಇದ್ದಾರೆ’ ಎಂಬ ಅರ್ಥದ ಅಭಿಪ್ರಾಯವನ್ನು ಪ್ರೊ. ಮೊಗಳ್ಳಿ ಗಣೇಶ್ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ವಾರದ ಸಂದರ್ಶನ, ಡಿ.31). ಆ ಮೂಲಕ ಮಾದಿಗ ಜಾತಿ ಮತ್ತು ಆ ಸಮುದಾಯದವರ ಬೇಡಿಕೆಗಳಿಗೆ ಇನ್ನಿತರ ಪ್ರಾಜ್ಞರ ವಲಯದಲ್ಲೂ ತಿರಸ್ಕಾರ ಭಾವ ಮೂಡಿಸಲು ಶ್ರಮಿಸಿದಂತಿದೆ.
‘ಒಳಮೀಸಲಾತಿಯಿಂದ ದಲಿತರ ಏಕತೆಗೆ ಧಕ್ಕೆ ಬರುತ್ತದೆ’ ಎನ್ನುವ ಅವರು, 1932ರ ದಲಿತರ ಪಾಲಿನ ಮರಣಶಾಸನ ಎನ್ನಲಾದ ‘ಪೂನಾ ಒಪ್ಪಂದ’ದ ಕುರಿತು ಏನು ಹೇಳುತ್ತಾರೆ? ಅಂಬೇಡ್ಕರ್ ಅವರನ್ನು ಮಣಿಸಲು ಗಾಂಧಿ ಬಳಸಿದ್ದು ಇದೇ ಐಕ್ಯ ಮಂತ್ರವನ್ನಲ್ಲವೇ? ದಲಿತರ ವಿಷಯದಲ್ಲಿ ಗಾಂಧಿ ನಡೆದುಕೊಂಡ ರೀತಿ ತಪ್ಪು ಎನ್ನುವುದಾದರೆ, ಮಾದಿಗರು ‘ನಮಗೆ ಅನ್ಯಾಯವಾಗಿದೆ, ಒಳಮೀಸಲಾತಿ ಕೊಡಿ’ ಎನ್ನುವುದು ಹೇಗೆ ತಪ್ಪಾಗುತ್ತದೆ?
‘ಹೊಲೆಯರು ಕಾಂಗ್ರೆಸ್, ಮಾದಿಗರು ಕೋಮುವಾದಿ ಬಿಜೆಪಿ’ ಎನ್ನುವ ಅವರು, ಅದು ಹೇಗೆ ಹೊಲೆ ಮಾದಿಗರನ್ನ ‘ಸಯಾಮಿ’ ಎನ್ನುತ್ತಾರೆ? ಹೀಗೆ ಪರಿಸ್ಥಿತಿಗೆ ತಕ್ಕಂತೆ ಮಾತು ಬದಲಾಯಿಸುವ ಮೊಗಳ್ಳಿ, ಜಾತಿನಿಷ್ಠರಾಗಿ ಮಾತ್ರ ಕಾಣುತ್ತಾರೆ.
–ಗುರುಪ್ರಸಾದ್ ಕಂಟಲಗೆರೆ, ಚಿ.ನಾ.ಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.