ADVERTISEMENT

ಮಾನಸಿಕ ಅಸ್ವಸ್ಥರೇ ?

ಡಾ.ಸಿ.ಆರ್.ಚಂದ್ರಶೇಖರ್
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST

ನಾನು ವೃತ್ತಿಯಿಂದ ಮನೋವೈದ್ಯ. ಇತ್ತೀಚಿನ ವರ್ಷಗಳಲ್ಲಿ, ರಾಜಕಾರಣದಲ್ಲಿರುವ ನಾಯಕರು, ಮರಿಪುಡಾರಿಗಳು ಮತ್ತು ಅವರ ಹಿಂಬಾಲಕರ ನಡೆ–ನುಡಿಗಳನ್ನು ಗಮನಿಸಿದರೆ, ವಿರೋಧಿಗಳ ಆರೋಪಗಳಿಗೆ ಅವರು ಪ್ರತಿಕ್ರಿಯಿಸುವುದನ್ನು ನೋಡಿದರೆ, ‘ಇವರು ಮಾನಸಿಕ ಅಸ್ವಸ್ಥರೇ’ ಎಂಬ ಅನುಮಾನ ಮೂಡುತ್ತದೆ.

ಒಂದು ಪಕ್ಷದವರು ಇನ್ನೊಂದು ಪಕ್ಷದವರಿಗೆ, ‘ತಲೆಕೆಟ್ಟಿದೆ, ಹುಚ್ಚುಹಿಡಿದಿದೆ’ ಎನ್ನುತ್ತಾರೆ. ಆ ಪಕ್ಷದವರೋ, ‘ಹುಚ್ಚು ನನಗಿಲ್ಲ, ಆ ಪಕ್ಷದವರೆಲ್ಲರೂ ಹುಚ್ಚರು, ಅವರಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾರೆ. ಬುದ್ಧಿ ಇಲ್ಲದವರು, ಮತಿಹೀನರು... ಎಂದೆಲ್ಲ ಪರಸ್ಪರ ಬೈದಾಡುತ್ತಾರೆ.

ನಿಜವಾದ ಮಾನಸಿಕ ಅಸ್ವಸ್ಥರು ನಾಟಕ ಮಾಡುವುದಿಲ್ಲ. ಅವರ ಅಸಹಜ ನಡೆ-ನುಡಿಗಳ ಹಿಂದೆ ಯಾವುದೇ ಉದ್ದೇಶ, ಸ್ವಾರ್ಥ ಇರುವುದಿಲ್ಲ. ಮಿದುಳಿನ ನರಕೋಶಗಳಲ್ಲಿ ಆಗುವ ರಾಸಾಯನಿಕ ಏರುಪೇರಿನಿಂದ ಅವರ ನಡೆ–ನುಡಿ ಅಸಂಬದ್ಧ, ಅಸಮರ್ಪಕವಾಗಿರುತ್ತದೆ. ಅವರ ಬೈದಾಟದ ಹಿಂದೆ ಸಂಚು ಇರುವುದಿಲ್ಲ. ಆದರೆ ರಾಜಕಾರಣಿಗಳ ನಡೆ–ನುಡಿಗಳ ಹಿಂದೆ ಕೋಪ, ದ್ವೇಷ, ಅಸಹನೆ ಮತ್ತು ಸ್ವಾರ್ಥದ ಕೊಳಕಿರುತ್ತದೆ. ವಿವೇಕ, ವಿವೇಚನೆಗಳ ಲಗಾಮು ಇರುವುದಿಲ್ಲ. ಹೀಗಾಗಿ ‘ಮಾನಸಿಕ ಅಸ್ವಸ್ಥರಂತೆ’ ಕಾಣುತ್ತಾರೆ.

ADVERTISEMENT

ಮತದಾರರು ಇಂಥವರನ್ನು ಸೋಲಿಸಿದರೆ ಇವರ ದುರಾಸೆ, ಸ್ವಾರ್ಥದ ‘ನಶೆ’ ಇಳಿಯುತ್ತದೆ. ಅವರ ಮಾನಸಿಕ ಸ್ವಾಸ್ಥ್ಯಕ್ಕೆ ಹಿಡಿದ ಗ್ರಹಣ ಬಿಡುತ್ತದೆ. ಈಗ ನಮ್ಮ ‘ಮತದಾರರು’ ತಾವೇ ‘ಮನೋವೈದ್ಯ’ರಾಗಬೇಕು. ರಾಜಕಾರಣಿಗಳ ಈ ‘ನಕಲಿ ಹುಚ್ಚಿಗೆ’ ನಿಜವಾದ ‘ಚಿಕಿತ್ಸೆ’ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.