ADVERTISEMENT

ಸ್ಪೃಶ್ಯರ ಸೇರ್ಪಡೆ ಸಲ್ಲ

ರಘೋತ್ತಮ ಹೊ.ಬ
Published 4 ಫೆಬ್ರುವರಿ 2018, 19:30 IST
Last Updated 4 ಫೆಬ್ರುವರಿ 2018, 19:30 IST

ಬೆಂಗಳೂರಿನಲ್ಲಿ ನಡೆದ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ‘ಎಸ್‌.ಸಿ.ಗೆ ಮಡಿವಾಳರ ಸೇರ್ಪಡೆ’ (ಪ್ರ.ವಾ., ಫೆ. 2) ಎಂದು ಮುಖ್ಯಮಂತ್ರಿ ಹೇಳಿರುವುದು ನಿಜಕ್ಕೂ ದುರದೃಷ್ಟಕರ. ಯಾಕೆಂದರೆ ಪರಿಶಿಷ್ಟ ಜಾತಿಗಳ ಮೀಸಲಾತಿಯು ಅಸ್ತಿತ್ವಕ್ಕೆ ಬಂದಿರುವುದು ಸಮಾಜದಲ್ಲಿ ಇರುವ ಅಸ್ಪೃಶ್ಯತೆಯ ಕಾರಣಕ್ಕೇ ಹೊರತು ಬೇರೇನಕ್ಕೂ ಅಲ್ಲ.

ಈ ನಿಟ್ಟಿನಲ್ಲಿ 1935ರಲ್ಲಿ ಅಸ್ತಿತ್ವಕ್ಕೆ ಬಂದ ಪರಿಶಿಷ್ಟ ಜಾತಿಗಳು ಎಂಬ ಈ ಪಟ್ಟಿಗೆ ಸುಮಾರು 83 ವರ್ಷಗಳ ಇತಿಹಾಸವಿದೆ. ಅದರಲ್ಲೂ ಅಸ್ಪೃಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬ ನೀತಿಗೆ 100ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಈ ನಿಟ್ಟಿನಲ್ಲಿ ತಮ್ಮ ‘ಅನ್ಟಚಬಲ್ಸ್’ ಕೃತಿಯಲ್ಲಿ ಈ ಮಾಹಿತಿಯನ್ನು ದಾಖಲಿಸಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರು 1911ರಲ್ಲೇ ಸ್ಪೃಶ್ಯರಿಂದ ಅಸ್ಪೃಶ್ಯರನ್ನು ಬೇರ್ಪಡಿಸಲು ಅಂದಿನ ಜನಗಣತಿ ಆಯುಕ್ತರು ಹಾಕಿಕೊಂಡಿದ್ದ ಮಾನದಂಡಗಳನ್ನು ಪ್ರಸ್ತಾಪಿಸುತ್ತಾರೆ. ಅವುಗಳಲ್ಲಿ ಒಂದೆರಡನ್ನು ದಾಖಲಿಸುವುದಾದರೆ ‘ಬ್ರಾಹ್ಮಣರ ಶ್ರೇಷ್ಠತೆಯನ್ನು ನಿರಾಕರಿಸುವವರು, ಸಾಮಾನ್ಯ ದೇವಾಲಯಕ್ಕೆ ಪ್ರವೇಶ ಇಲ್ಲದವರು, ಕೇವಲ ಸ್ಪರ್ಶದಿಂದ  ಮಾಲಿನ್ಯ ಉಂಟುಮಾಡುವವರು, ಸತ್ತವರನ್ನು ಹೂಳುವವರು, ಗೋವನ್ನು ಪೂಜಿಸದವರು ಮತ್ತು ಗೋವನ್ನು ತಿನ್ನುವವರು...’ ಇತ್ಯಾದಿ.

ಈ ಮಾನದಂಡಗಳ ಆಧಾರದ ಮೇಲೆ ಅಸ್ಪೃಶ್ಯ ರ ಪ್ರತ್ಯೇಕ ದಾಖಲೀಕರಣ ಆಯಿತು ಮತ್ತು 1935ರ ಕಾಯ್ದೆಯಲ್ಲಿ ಈ ವರ್ಗಗಳಿಗೆ ‘ಪರಿಶಿಷ್ಟ ಜಾತಿ’ ಎಂಬ ಪಟ್ಟಿಯ ರೂಪದಲ್ಲಿ ನ್ಯಾಯಬದ್ಧ ಮೀಸಲಾತಿಯೂ ದೊರಕಿತು. ಇದು ಪರಿಶಿಷ್ಟ ಜಾತಿಗಳ ವಾಸ್ತವ ಇತಿಹಾಸ.

ADVERTISEMENT

ಆಶ್ಚರ್ಯವೆಂದರೆ ಇತಿಹಾಸ ಮತ್ತು ಸಂವಿಧಾನದ ಪ್ರಕ್ರಿಯೆಗಳೇ ಹೀಗಿರಬೇಕಾದರೆ ಅದಕ್ಕೆ ವಿರುದ್ಧವಾಗಿ ಪರಿಶಿಷ್ಟ ಜಾತಿಗಳ ಆ ಪಟ್ಟಿಗೆ ಅಸ್ಪೃಶ್ಯರಲ್ಲದವರನ್ನು ಅಂದರೆ ಮಡಿವಾಳರಂತಹ ಸ್ಪೃಶ್ಯರನ್ನು ಸೇರಿಸುವುದು ಸರಿಯಲ್ಲ. ಇಂಥ ಪ್ರಯತ್ನ ಅಸ್ಪೃಶ್ಯರ ಹಕ್ಕುಗಳನ್ನು ಕಿತ್ತುಕೊಳ್ಳುವ ಅಥವಾ ಮೀಸಲಾತಿಯ ಅನುಕೂಲಗಳನ್ನು ಭವಿಷ್ಯದಲ್ಲಿ ಅವರು ಆ ಪಟ್ಟಿಯಲ್ಲಿ ಇದ್ದರೂ ಅವರಿಗೆ ದೊರೆಯದಂತೆ ಮಾಡುವ ಹುನ್ನಾರ ಹೊಂದಿದೆ ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳಬಹುದು.

ಅಂದಹಾಗೆ ಹಾಗಿದ್ದರೆ ಮಡಿವಾಳರಿಗೆ ಮೀಸಲಾತಿ ಬೇಡವೇ ಎಂದು ಯಾರಾದರೂ ಪ್ರಶ್ನಿಸಬಹುದು. ಖಂಡಿತ, ಅವರಿಗೂ ಪ್ರವರ್ಗ-2ಎ ನಲ್ಲಿ ಪರಿಶಿಷ್ಟರಷ್ಟೇ ಅಂದರೆ ಶೇ 15 ರಷ್ಟು ಮೀಸಲಾತಿ ಇದೆ. ಹೀಗಿರುವಾಗ ಪರಿಶಿಷ್ಟರ ಪಟ್ಟಿಗೆ ಸ್ಪೃಶ್ಯರಾದ ಮಡಿವಾಳರು ಏಕೆ? ಅಸ್ಪೃಶ್ಯರ ಹಕ್ಕುಗಳನ್ನು ಕಿತ್ತುಕೊಳ್ಳುವ ಇಂತಹ ಹುನ್ನಾರಗಳನ್ನು ಎಲ್ಲರೂ ವಿರೋಧಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.