ಎನಿತೆತ್ತರಾ ಲೋಕೋತ್ತರ
ಗೋಮಟೇಶ್ವರ ಭವ್ಯಾಕಾರ
ವದನದಿ ಬೆಳಗುವ ನಿರ್ಮಲ ಹಾಸ
ಕಳಚಿಯೆ ನಿಂದಿಹ ಮೋಹದ ಪಾಶ.
ಸದಮಲ ದಿವ್ಯ ದಿಗಂಬರ ವೇಷ
ಮೇಲ್ಗಾಪದುವೆ ಅನಂತಾಕಾಶ
ಹಣೆಯಲಿ ಸೊಬಗಿನ ಸುಳಿಸುಳಿ ಕುರುಳು
ಮುಖದಲಿ ಮಿಂಚಿದೆ ಅರಿವಿನ ಹುರುಳು
ನಗುತಿಹನೀಕ್ಷಿಸಿ ಲೋಕದ ಮರುಳು
ನೀತಿಗೊಲಿನ ಸದ್ಧರ್ಮದ ನೆರಳು
ಪಾದಮೂಲದಿ ಕುಕ್ಕುಟ ನಾಗ
ನಾಲಗೆ ಸುತ್ತಿದೆ ವಲ್ಲರಿರಾಗ
ಆಜಾನುಬಾಹು ಪ್ರತಿಮಾಯೋಗ
ಆಕಾರವಾಂತಿಹ ನಿರುಪಮ ತ್ಯಾಗ
ಉಕ್ಕಿ ಹರಿದಿದೆ ಕರುಣೆಯ ಕಾಂತಿ
ಬಿಟ್ಟು ತೊಲಗಿದೆ ಭಯ ವಿಭ್ರಾಂತಿ
ಬೆಳಗಿದೆ ಪದತರ ಮೋಕ್ಷದ ಶಾಂತಿ
ತೊಳಗಿದೆ ಪರಮ ಅಹಿಂಸೆಯ ನೀತಿ
ಅಮೃತ ಸೋಮೇಶ್ವರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.