ADVERTISEMENT

ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಾಣ ಸಲ್ಲ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 19:30 IST
Last Updated 30 ಜೂನ್ 2020, 19:30 IST

ಹಿರಿಯ ನಟ ಅಂಬರೀಷ್‌ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ₹ 5 ಕೋಟಿ ದೇಣಿಗೆ ನೀಡುತ್ತಿರುವುದು ಸಂತೋಷದ ವಿಷಯ. ಆದರೆ ಅದಕ್ಕಾಗಿ ಕಂಠೀರವ ಸ್ಟುಡಿಯೊ ಆವರಣದಲ್ಲಿ ಎಕರೆಗಟ್ಟಲೆ ಜಾಗ ಬಿಟ್ಟುಕೊಡುತ್ತಿರುವುದು ಯುಕ್ತ ನಡೆ ಅಲ್ಲ. ಮಂಡ್ಯ ಹಾಗೂ ಬೆಂಗಳೂರಿನ ರಾಜಕಾರಣಿಗಳಿಗೆ ತಮ್ಮ ಲಾಭಕ್ಕಾಗಿ ಅಂಬರೀಷ್‌ ಅವರ ಅಭಿಮಾನಿಗಳನ್ನು ಓಲೈಸಿಕೊಳ್ಳಬೇಕಾದ ಅನಿವಾರ್ಯ ಇರಬಹುದು. ಆದರೆ ಅದಕ್ಕಾಗಿ ಅವರು ಈ ಮಟ್ಟಕ್ಕೆ ಇಳಿಯಬಾರದು. ಕಂಠೀರವ ಸ್ಟುಡಿಯೊದಲ್ಲಿ ಹೆಚ್ಚುವರಿ ಜಾಗವಿದ್ದರೆ ಉತ್ತಮ ಚಿತ್ರಗಳನ್ನು ನಿರ್ಮಿಸಲು ಅಗತ್ಯವಿರುವ ಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲಿ. ಬೇಕಿದ್ದರೆ ಅಂಬರೀಷ್ ಕುಟುಂಬದವರು ತಮ್ಮ ಖಾಸಗಿ ಜಮೀನಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡಲಿ. ಆಗ ಸರ್ಕಾರ ಹಣ ನೀಡುವುದೇನು ಬಂತು, ಅಂಬರೀಷ್ ಅವರ ಅಭಿಮಾನಿಗಳೇ ಸ್ಮಾರಕ ನಿರ್ಮಾಣಕ್ಕೆ ₹ 5 ಕೋಟಿ ದೇಣಿಗೆಯನ್ನು ಸಂತೋಷವಾಗಿ ನೀಡುತ್ತಾರೆ.

ಅಂಬರೀಷ್ ಬದುಕಿದ್ದರೆ ಸರ್ಕಾರದ ಈ ನಿರ್ಧಾರವನ್ನು ಸರ್ವಥಾ ಒಪ್ಪುತ್ತಿರಲಿಲ್ಲ. ಭವಿಷ್ಯದಲ್ಲಿ ಅಂಬರೀಷ್‌ ಅವರಂತಹ ಅಸಂಖ್ಯ ಪ್ರತಿಭೆಗಳಿಗೆ ಜನ್ಮ ನೀಡಲಿರುವ ಕಂಠೀರವ ಸ್ಟುಡಿಯೊದಂತಹ ಕಲೆಯ ಜೀವಂತ ಮಂದಿರವನ್ನು ಈ ರೀತಿ ಮೃತರ ಸ್ಮಾರಕವನ್ನಾಗಿಸಲು ಅಭಿಮಾನಿಗಳೂ ಒಪ್ಪಲಾರರು. ಪ್ರತಿಯೊಬ್ಬ ಸಾಧಕನಿಗೂ ಹೀಗೆ ಅವನ ಕರ್ಮಭೂಮಿಯಲ್ಲೇ ಸಮಾಧಿ ಅಥವಾ ಸ್ಮಾರಕ ನಿರ್ಮಿಸುತ್ತಾ ಹೋದರೆ ವಿಶ್ವವಿದ್ಯಾಲಯ, ಕ್ರೀಡಾಂಗಣ, ಕಲಾಕ್ಷೇತ್ರ, ಸ್ಟುಡಿಯೊ, ವಿಧಾನಸೌಧ- ವಿಕಾಸಸೌಧ ಮುಂತಾದ ಕರ್ಮಭೂಮಿಗಳೆಲ್ಲ ಮೃತರ ಸ್ಮಾರಕಗಳಾಗಿ ಮಾರ್ಪಡುತ್ತವೆ.

–ಡಾ. ಟಿ.ಎನ್.ವಾಸುದೇವಮೂರ್ತಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.