ಅನ್ನಭಾಗ್ಯ ಯೋಜನೆಯಡಿ ಈವರೆಗೆ ಉಚಿತವಾಗಿ ನೀಡಲಾಗುತ್ತಿದ್ದ ಅಕ್ಕಿಗೆ ಇನ್ನು ಮುಂದೆ ಕನಿಷ್ಠ ದರ ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ. ಹೀಗೆ ಸಂಗ್ರಹಿಸಿದ ಹಣವನ್ನು ವಾಪಸ್ ಫಲಾನುಭವಿಗಳಿಗೆ ಬೇರೆ ರೂಪದಲ್ಲಿ ವಿತರಿಸುವ ಆಲೋಚನೆಯು ಒಪ್ಪುವಂಥದ್ದೇ. ಆದರೆ ಇದಕ್ಕಾಗಿ ಆಯ್ಕೆ ಮಾಡಿಕೊಂಡ ದಾರಿ ಸಮಂಜಸವಾದುದಲ್ಲ. ಏಕೆಂದರೆ, ವಾಸ್ತವ ಅರಿಯದೆ ಎಲ್ಲೋ ಕುಳಿತು ಈ ಯೋಜನೆಯನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಈ ಯೋಜನೆಯ ಅಗತ್ಯ ಎಷ್ಟು ಎಂಬುದು ತುತ್ತು ಅನ್ನಕ್ಕೂ ಪರದಾಡುವ ಫಲಾನುಭವಿಗಳಿಗೆ ಗೊತ್ತು. ಹೀಗಾಗಿ ಉಚಿತ ಅಕ್ಕಿಯ ಮೌಲ್ಯವನ್ನು ಸಂಕುಚಿತತೆಯ ದುರ್ಬೀನಿನಲ್ಲಿ ಅಳೆಯುವುದು ಸೂಕ್ತವಲ್ಲ.
ಕೊರೊನಾ ಸಾಂಕ್ರಾಮಿಕ ಸಂದರ್ಭವು ಅನ್ನಭಾಗ್ಯ ಯೋಜನೆಯ ಮಹತ್ವವನ್ನು ತೆರೆದಿಟ್ಟಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯವು ಆಹಾರ ಪೂರೈಕೆ ಮತ್ತು ಹಸಿವಿನ ಸೂಚ್ಯಂಕದ ವಿಚಾರದಲ್ಲಿ ಎಷ್ಟೋ ಪಟ್ಟು ಉತ್ತಮವಾಗಿದೆ. ಇದಕ್ಕೆ ಆಹಾರ ಭದ್ರತೆ ಯೋಜನೆಯ ಭಾಗವಾಗಿರುವ ಅನ್ನಭಾಗ್ಯ ಯೋಜನೆ ಸಹ ಕಾರಣ ಎಂಬುದನ್ನು ಮರೆಯಬಾರದು.
ಪ್ರವೀಣ ನಾಗಪ್ಪ ಯಲವಿಗಿ,ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.