ADVERTISEMENT

ಟೀಕಿಸಿದ್ದರ ಹಿಂದೆ ಓಲೈಕೆ ಉದ್ದೇಶ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಸೆಪ್ಟೆಂಬರ್ 2020, 16:00 IST
Last Updated 3 ಸೆಪ್ಟೆಂಬರ್ 2020, 16:00 IST

ರಾಜ್ಯದ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಇತ್ತೀಚೆಗೆ ಶ್ರದ್ಧಾಂಜಲಿ ಅರ್ಪಿಸಿದ ಕಾರ್ಯಕ್ರಮದಲ್ಲಿ, ನಿವೃತ್ತಿ ನಂತರ ಅವರು ನಾಗಪುರದ ಆರ್‌ಎಸ್ಎಸ್ ಶಾಖೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದುದಕ್ಕೆ ಹಿರಿಯ ಕಾಂಗ್ರೆಸ್ಸಿಗರು ಆಕ್ಷೇಪದ ದನಿ ಎತ್ತಿದ್ದಾರೆ. ಮುಖರ್ಜಿಯವರ ವರ್ಚಸ್ಸನ್ನು ಸಹ ಅವರು ಈ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಂಡಿಲ್ಲ.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿವಂಗತರನ್ನು ಟೀಕಿಸುವುದು ಸೌಜನ್ಯವೇ? ಈ ಮುಖಂಡರಿಗೆ ಎಐಸಿಸಿಯವರ ಒಪ್ಪಿಗೆ ಇಲ್ಲದೇ ಈ ಬಗ್ಗೆ ಆಕ್ಷೇಪಿಸುವ ಧೈರ್ಯ ಇತ್ತೇ? ಸಂಘದ ಶಾಖೆಗೆ ಪ್ರಣವ್ ಅವರು ಹೋಗಲು ಒಪ್ಪಿಕೊಂಡಿದ್ದಾರೆ ಎಂಬ ವರದಿ ಬಂದಾಗಲೇ ಈ ಮುಖಂಡರು ಅವರನ್ನು ಭೇಟಿ ಮಾಡಿ, ಶಾಖೆಗೆ ಹೋಗದಿರುವಂತೆ ಅವರ ಮನವೊಲಿಸಲಿಲ್ಲವೇಕೆ? ಪ್ರಣವ್‌ ಅವರು ಶಾಖೆಗೆ ಹೋದಾಗ ರಾಷ್ಟ್ರಗೀತೆ ಹಾಡುವಂತಹ, ಮಾಜಿ ರಾಷ್ಟ್ರಪತಿಗೆ ಕೊಡಬೇಕಾದ ಆಚಾರ ಸಂಹಿತೆಗೆ ತಿಲಾಂಜಲಿ ಕೊಟ್ಟ ಬಗ್ಗೆಯೂ ಕಾಂಗ್ರೆಸ್ ಮುಖಂಡರ‍್ಯಾರೂ ಪ್ರತಿಭಟಿಸಲಿಲ್ಲ. ಮಾಜಿ ರಾಷ್ಟ್ರಪತಿ ಮಾತನಾಡಿದ ನಂತರ ಬೇರೆ ಯಾರೂ ಭಾಷಣ ಮಾಡಬಾರದು ಎಂಬುದು ಸಹ ಒಂದು ಆಚಾರ ಸಂಹಿತೆ. ಪ್ರಣವ್ ಭಾಷಣದ ಬಳಿಕ ಭಾಗವತ್ ಅವರ ಉದ್ದನೆಯ ಭಾಷಣ ಇತ್ತು. ಇದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳದ ಮುಖಂಡರು ಈಗ ಪ್ರಣವ್ ಅವರನ್ನು ಸಾರ್ವಜನಿಕವಾಗಿ ಟೀಕಿಸಿದ್ದರ ಹಿಂದೆ, ಕೇಂದ್ರ ನಾಯಕರನ್ನು ಓಲೈಸುವ ಉದ್ದೇಶ ಇದ್ದಿರಬಹುದೇ?

ಪಿ.ಕೇಶವ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.