ಬೆಂಗಳೂರಿನ ನಾಗವಾರದಲ್ಲಿ ಬಿಡಿಎಗೆ ಸೇರಿದ ಸುಮಾರು ನೂರು ಕೋಟಿ ರೂಪಾಯಿ ಮೌಲ್ಯದ ಒಂದೂಕಾಲು ಎಕರೆ ಜಾಗದಲ್ಲಿ ನಿರ್ಮಿಸಲಾಗಿದ್ದ ವಾಣಿಜ್ಯ ಮಳಿಗೆಗಳನ್ನು ಇತ್ತೀಚೆಗೆ ತೆರವುಗೊಳಿಸಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಪ್ರಕ್ರಿಯೆಗೆ ಮೂರು ದಶಕಗಳಿಗಿಂತಲೂ ಅಧಿಕ ಸಮಯ ತಗುಲಿರುವುದು ಅಚ್ಚರಿ ಮೂಡಿಸುತ್ತದೆ. ನಗರದ ವಿವಿಧ ಬಡಾವಣೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಗೋಪ್ಯವಾಗಿ ಉಳಿದಿಲ್ಲ.
ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಲಾದ ಕಟ್ಟಡಗಳನ್ನು ಹಲವಾರು ವರ್ಷಗಳ ಕಾಲ ಪುಕ್ಕಟೆಯಾಗಿ ಅನುಭವಿಸಲು ಬಿಟ್ಟು ತದನಂತರ ಒತ್ತುವರಿಯನ್ನು ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗುತ್ತದೆ. ಈ ನಷ್ಟವನ್ನು ಒತ್ತುವರಿದಾರರಿಂದಲೇ ವಸೂಲಿ ಮಾಡಬೇಕು ಹಾಗೂ ಒತ್ತುವರಿ ಮಾಡಲು ಸಹಕರಿಸಿದ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ಈ ಮೂಲಕ ಸರ್ಕಾರಿ ಭೂಮಿ ಒತ್ತುವರಿಗೆತಡೆಯೊಡ್ಡಬೇಕು.
-ಜಿ.ನಾಗೇಂದ್ರ ಕಾವೂರು,ಸಂಡೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.