ADVERTISEMENT

ವಾಚಕರ ವಾಣಿ | ಕಿರೀಟಪ್ರಾಯ ಪರೀಕ್ಷೆ: ಬೇಡಿಕೆ ಪರಿಗಣಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 8 ಜೂನ್ 2021, 19:30 IST
Last Updated 8 ಜೂನ್ 2021, 19:30 IST

ಯುವಜನರ ಬದುಕಿಗೆ ನೇರವಾದ ಸಂಬಂಧವಿರುವ ಕೇಂದ್ರೀಯ ನೇಮಕಾತಿ ಪರೀಕ್ಷೆಗಳ ಬಗ್ಗೆ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಿರುವುದು ಆಶಾದಾಯಕ ಬೆಳವಣಿಗೆ. ಭಾರತದ ಒಕ್ಕೂಟ ಸರ್ಕಾರದಿಂದ ಆಗುತ್ತಿರುವ ಹಿಂದಿ ಹೇರಿಕೆಯನ್ನು ಅವರು ಪ್ರಶ್ನಿಸುತ್ತಿದ್ದಾರೆ. ನಾಡು- ನುಡಿಗೆ ತಮ್ಮ ರಾಜಕೀಯವನ್ನು ಇನ್ನಷ್ಟು ಕೇಂದ್ರೀಕರಿಸುವ ಮೂಲಕ ತಮ್ಮದು ಅಸಲಿ ಪ್ರಾದೇಶಿಕ ಪಕ್ಷ ಎಂಬುದನ್ನು ಅವರು ಸಾಬೀತು ಪಡಿಸಬೇಕಾಗಿದೆ.

ಇದೇ 27ರಂದು ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಇತ್ತು. ಕೋವಿಡ್ ಎರಡನೇ ಅಲೆಯ ಪರಿಣಾಮವಾಗಿ ಅದು ಅಕ್ಟೋಬರ್‌ಗೆ ಮುಂದೂಡಲ್ಪಟ್ಟಿದೆ. ಇದು ಕೇಂದ್ರೀಯ ನೇಮಕಾತಿ ಪರೀಕ್ಷೆಗಳಲ್ಲಿಯೇ ಕಿರೀಟಪ್ರಾಯವಾಗಿರುವ ಪರೀಕ್ಷೆ. ಆದರೆ, ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಇದು ಇರುತ್ತದಾದ್ದರಿಂದ ಈ ಸಂಧಿಕಾಲದಲ್ಲಿ ನಾವು ಜಾಗೃತರಾಗಬೇಕಿದೆ. ಸಾರ್ವಜನಿಕರೂ ಎಚ್ಚೆತ್ತುಕೊಳ್ಳಬೇಕಾಗಿದೆ.

ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸುವಂತೆ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇದು ತಮಿಳರು, ತೆಲುಗರು ಸೇರಿದಂತೆ ಹಿಂದಿಯೇತರ ಎಲ್ಲಾ ಭಾಷಿಕರ ಸಮಸ್ಯೆಯೂ ಆಗಿರುವುದರಿಂದ, ಇಂಗ್ಲಿಷ್ ಗೊತ್ತಿದ್ದವರು ಇಂತಹ ಮಹತ್ವದ ವಿಷಯವನ್ನು ಇಂಗ್ಲಿಷ್‌ನಲ್ಲಿಯೂ ಬರೆಯಬೇಕು. ಈ ಮೂಲಕ ಕರ್ನಾಟಕದ ಹೊರಗೂ ಈ ಬೇಡಿಕೆಯನ್ನು ವಿಸ್ತರಿಸಬೇಕಿದೆ. ಹಿಂದಿಯೇತರ ಎಲ್ಲ ಭಾಷಿಕರನ್ನೂ ಒಳಗೊಳ್ಳಬೇಕಿದೆ.

ADVERTISEMENT

-ಗಿರೀಶ್ ಮತ್ತೇರ, ಯರಗಟ್ಟಿ ಹಳ್ಳಿ, ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.