ADVERTISEMENT

ಚುರುಮುರಿ: ಮಾತ್ರೆ ಮಂತ್ರ!

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 19:28 IST
Last Updated 2 ಡಿಸೆಂಬರ್ 2020, 19:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

‘ಏನ್ ಮುದ್ದಣ್ಣ, ಅನ್‌ಲಾಕ್ ಆದಾಗಿಂದ ಕಂಡೇ ಇಲ್ಲ, ಎಲ್ಹೋಗಿದ್ದೆ’ ಅಂತ ಕೇಳ್ದ ವಿಜಿ.

‘ಕೊರೊನಾ ಟೈಮ್‌ನಲ್ಲಿ ಚೆನ್ನಾಗಿ ನಡೀತಿರೋ ಬಿಸಿನೆಸ್ ಅಂದ್ರೆ ಮೆಡಿಕಲ್ ಸ್ಟೋರ್ ಮಾತ್ರ.‌ ಅದಕ್ಕೆ ನಾನೂ ಒಂದು ಮೆಡಿಕಲ್ ಸ್ಟೋರ್ ಓಪನ್‌ ಮಾಡಿದೀನಿ ಸಾರ್...’

‘ಈಗ್ಲೇ ಒಂದೊಂದ್ ರೋಡ್‌ನಲ್ಲಿ ನಾಲ್ಕಾರು ಔಷಧ ಅಂಗಡಿಗಳಿವೆ, ಇನ್ನು ನಿನಗೆಲ್ಲಿ ಬಿಸಿನೆಸ್ ಆಗುತ್ತೆ...’

ADVERTISEMENT

‘ನನ್ ಮೆಡಿಕಲ್ ಸ್ಟೋರ್‌ನಲ್ಲಿ ಸಿಗೋ ಮಾತ್ರೆಗಳು ಮಾಮೂಲಿಯಂಥವಲ್ಲ ಸಾರ್, ತುಂಬಾ ಪವರ್‌ಫುಲ್ಲು...’

‘ಕೊರೊನಾನ ಓಡಿಸಿಬಿಡ್ತಾವಾ...’ ಕಾಲೆಳೆದ ವಿಜಿ.

‘ಕೊರೊನಾನೇ ಏನು, ಗ್ಯಾಸ್ಟ್ರಿಕ್‌ನೂ ಓಡಿಸುತ್ತವೆ. ಆದ್ರೆ ಒಂದ್ ಕಂಡೀಷನ್ ಸಾರ್‌, ಯಾವುದೇ ಸಮಸ್ಯೆ ಇದ್ರೂ ಡಜನ್ ಮಾತ್ರೆ ತಗೊಳ್ಳಲೇಬೇಕು. ಅಂದಾಗ ಮಾತ್ರ ನೀವು ‘ಸಂತೋಷ’ವಾಗಿರ್ತೀರ. ಹೆಲ್ತ್‌ ಅಷ್ಟೇ ಅಲ್ಲ, ಸೋಷಿಯೊ‌-ಪೊಲಿಟಿಕಲ್ ಪ್ರಾಬ್ಲಮ್‌ಗೂ ನನ್ನಲ್ಲಿ ಪರಿಹಾರ ಇದೆ...’ ಕಾಲರ್ ಏರಿಸಿಕೊಂಡ ಮುದ್ದಣ್ಣ.

‘ಅಂದ್ರೆ...’

‘ಅಂದ್ರೆ ಈಗ ಪಂಚಾಯ್ತಿ ಎಲೆಕ್ಷನ್ ಐತಲ್ಲ ಸಾರ್, ಸರ್ಕಾರ ಯಾರಿಗೂ ಈ ನಿಗಮ, ಗಿಗಮ ಅನೌನ್ಸ್ ಮಾಡೋದೇ ಬೇಡ, ಪ್ರತಿಯೊಬ್ಬರಿಗೂ ಡಜನ್ ಮಾತ್ರೆ ಕೊಟ್ರೆ ಸಾಕು, ಎಲ್ರೂ ಅವರ ಪಕ್ಷಕ್ಕೇ ವೋಟ್ ಹಾಕ್ತಾರೆ...’

‘ಅದ್ಹೆಂಗೆ ಕೆಲಸ ಮಾಡುತ್ತೆ...’

‘ಕೈಯಲ್ಲಿ ದುಡ್ಡಿಲ್ಲದಿದ್ರೂ ಇದ್ದಂಗೆ ಫೀಲ್ ಆಗ್ತಿರುತ್ತೆ, ಜಾಬ್ ಇಲ್ದಿದ್ರೂ ಕೆಲಸ ಮಾಡಿದ ಹಂಗೆ ಅನಿಸ್ತಿರುತ್ತೆ. ಯಾರೆಷ್ಟೇ ಸುಳ್ ಹೇಳಿದ್ರೂ ಸತ್ಯ ಸತ್ಯ ಸತ್ಯ ಅನಿಸುತ್ತೆ...’

ಮುದ್ದಣ್ಣನಿಗೆ ದೆಹಲಿಯಿಂದ ಫೋನ್ ಬಂತು, ಒಂದೇ ಸಮನೆ ಬೆವರತೊಡಗಿದ.
‘ಏನಾಯ್ತು...’

‘ಮಾತ್ರೆ ಅದಲು-ಬದಲಾಗಿವೆ ಸರ್. ‘ನಾಮ್ ಬದಲ್ ಕಾ ರಹಸ್ಯ್’ ಟ್ಯಾಬ್ಲೆಟ್ ಕೇಳಿದ್ರು, ‘ಕಿಸಾನ್ ಕಾ ಗುಸ್ಸಾ’ ಮಾತ್ರೆ ಕೊಟ್‌ಬಿಟ್ಟಿದೀನಿ...!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.