ನಮ್ಮದೊಂದು ಪುಟ್ಟ ಹಳ್ಳಿ. ಇಲ್ಲಿನ ಜನರ ಪ್ರತಿದಿನದ ಸಂಜೆಯ ಹರಟೆ, ಮನರಂಜನೆಗೆ ಊರ ಆಂಜನೇಯನ ಗುಡಿಯ ಆವರಣ ಮೀಸಲು. ವಯಸ್ಸು ಮತ್ತು ಜಾತಿಯ ಭೇದವಿಲ್ಲದೆ ಬಹುತೇಕರು ಸಮಾನಮನಸ್ಕರೊಡನೆ ಸೇರಿ ಮಾತುಕತೆಗಳಲ್ಲಿ ತೊಡಗುತ್ತಾರೆ. ಬೇಸಾಯ, ಸಿನಿಮಾ, ಮಳೆ, ಕೂಲಿ, ರಾಜಕೀಯ, ರೋಗರುಜಿನ, ಕ್ರಿಕೆಟ್ ಹೀಗೆ ಓಣಿಗಳ ಸುದ್ದಿಯಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದ ವಿಚಾರಗಳವರೆಗೂ ಮಾತುಕತೆ ಸಾಗುತ್ತದೆ. ಇಂತಹ ಅನೌಪಚಾರಿಕ ಶಿಕ್ಷಣ ಕೇಂದ್ರವಾಗಿರುವ ನಮ್ಮ ಗುಡಿ ಇತ್ತೀಚಿನ ದಿನಗಳಲ್ಲಿ ಮಾತಿಲ್ಲದೆ ಸೊರಗಿದಂತಾಗಿದೆ.
ಹೆಚ್ಚಿನವರ ಕೈಗಳಲ್ಲಿ ದುಬಾರಿ ಫೋನುಗಳು ಮತ್ತು ಅದಕ್ಕೆ ಉಚಿತ ಕರೆ- ಇಂಟರ್ನೆಟ್ ಸೌಲಭ್ಯಗಳಿದ್ದರೂ ಸಂಜೆಯ ಹರಟೆಗೆ, ತಮಾಷೆಗೆ ಕಿಂಚಿತ್ತೂ ತೊಂದರೆ ಆಗಿರಲಿಲ್ಲ. ಕೊರೊನಾ ಸೋಂಕಿನ ಆತಂಕದ ನಡುವೆಯೂ ಅಂತರ ಕಾಯ್ದು ಕೊಂಡೇ ಮಾತುಕತೆ ಮುಂದುವರಿಸಿದ್ದೆವು. ಆದರೆ ಇತ್ತೀಚೆಗೆ ಮೊಬೈಲ್ ಗಳಲ್ಲಿ ಶುರುವಾಗಿರುವ ಆನ್ಲೈನ್ ಜೂಜಾಟ ಮಾತ್ರ ನಮ್ಮ ಮಾತು, ಹರಟೆಗೆ ದೊಡ್ಡ ಹೊಡೆತ ಕೊಟ್ಟಿದೆ. ಈ ಜೂಜಾಟದಲ್ಲಿ ಭಾಗವಹಿಸಿ ಅನೇಕರು ದುಡ್ಡು ಕಳೆದುಕೊಂಡಿದ್ದಾರೆ. ಜೂಜಾಟದಿಂದ ಈವರೆಗೆ ನಮ್ಮ ಊರಲ್ಲಿ ಯಾರೊಬ್ಬರೂ ಹಣ ಗೆದ್ದಿದ್ದಿಲ್ಲ. ಇಂತಿದ್ದರೂ ಇದನ್ನು ಬಿಡಲಾಗದೆ ಆಡುತ್ತಲೇ ಇದ್ದಾರೆ. ಜೊತೆಗೆ, ದಿನನಿತ್ಯದ ಕೆಲಸಗಳು ಅಸ್ತವ್ಯಸ್ತವಾಗುವುದು, ಪೋಷಕರ ಅಸಮಾಧಾನ, ಹಣ ಕಳೆದುಕೊಳ್ಳುತ್ತಿರುವ ಭೀತಿ ಮುಂತಾದವು ಗಳಿಂದ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಂಡಿದ್ದಾರೆ. ಜೂಜಾಟವು ಅಪರಾಧವಾದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಎಲ್ಲ ಬಗೆಯ ಆನ್ಲೈನ್ ಜೂಜಾಟದ ಆ್ಯಪ್ಗಳನ್ನೂ ನಿಷೇಧಿಸಬೇಕು.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.