ಕೋವಿಡ್ನ ಅಬ್ಬರ ಹೆಚ್ಚಾದಂತೆ ಅದರಲ್ಲಿ ಸಿಲುಕಿಕೊಂಡ ಅಮಾಯಕರು ಆರ್ಥಿಕವಾಗಿಯೂ ಸಾಮಾಜಿಕ ವಾಗಿಯೂ ಮಾನಸಿಕವಾಗಿಯೂ ಅನೇಕ ಸಂಕಷ್ಟಗಳಿಗೆ ಗುರಿಯಾಗಿ ತೊಂದರೆ ಅನುಭವಿಸುತ್ತಿದ್ದಾರೆ. ನನ್ನ ಸಂಬಂಧಿ ಶಂಕಿತ ಕೊರೊನಾ ಸೋಂಕಿತರೊಂದಿಗೆ ಮಾತನಾಡಿದ್ದೇ ಕಾರಣ ವಾಗಿ ತಾನೂ ಟೆಸ್ಟ್ಗೆ ಹೋಗಬೇಕಾಯಿತು. ಅಲ್ಲಿ ಹಣ ಕಟ್ಟಿ ಬಾಡಿಗೆ ಕೋಣೆಯೊಂದರಲ್ಲಿ ಇದ್ದು, ಕೆಲ ದಿನಗಳ ಬಳಿಕ ಪರೀಕ್ಷೆ ನಡೆದು, ಮತ್ತೂ ಕೆಲ ದಿನಗಳ ಬಳಿಕ ಸೋಂಕು ಇಲ್ಲ ಎಂದು ವೈದ್ಯರು ಹೇಳಿದ್ದರಿಂದ ಬಸ್ ಹಿಡಿದು ಮನೆಗೆ ಬಂದರು.
ಸೋಂಕಿನ ಕಾರಣವಾಗಿ ಕರೆದೊಯ್ಯುವ ಸಿಬ್ಬಂದಿಯ ಮಾಹಿತಿ ಇರದಾದಾಗ ರೋಗಿಯ ಸುರಕ್ಷತೆ ಬಗ್ಗೆ ಮನೆಯವರಿಗೆ ಆತಂಕ ಇದ್ದೇ ಇರುತ್ತದೆ. ಇನ್ನು ಆಸ್ಪತ್ರೆಗಳ ಓಡಾಟ, ಚಿಕಿತ್ಸೆಯ ಖರ್ಚನ್ನೂ ರೋಗಿಯೇ ಭರಿಸಬೇಕಾಗಿರುವುದು ಅನೇಕ ಬಡ ಕುಟುಂಬಗಳಿಗೆ ಹೊರೆಯಾಗಿದೆ. ಕೊರೊನಾ ಸೋಂಕಿತರನ್ನು ಮನೆಯಿಂದ ಕರೆದೊಯ್ದು ಮರಳಿ ಮನೆಗೆ ತಲುಪಿಸುವುದಲ್ಲದೆ ಎಲ್ಲಾ ವೆಚ್ಚವನ್ನೂ ಸರ್ಕಾರವೇ ಭರಿಸುವಂತಾದರೆ ರೋಗಿಗಳು ತಾವಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ.
ಜನರಿಗೆ ಉಚಿತವಾಗಿ ಕೊಡುವ ಇತರ ಯೋಜನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಆರೋಗ್ಯ ಯೋಜನೆಯ ಭಾಗವಾಗಿ ಒಮ್ಮೆ ಎಲ್ಲರಿಗೂ ಜೀವವಿಮೆ ಮಾಡಿಸಿ, ಒಂದೆರಡು ಕಂತುಗಳನ್ನು ಸರ್ಕಾರವೇಕಟ್ಟುವಂತಾಗಬೇಕು. ಆಗಲಾದರೂ ಜನರ ಭೀತಿ ಕಡಿಮೆ ಆಗುತ್ತದೆ. ಆಸ್ಪತ್ರೆಗಳಲ್ಲಿನ ಅಧ್ವಾನ, ವಿಪರೀತ ಖರ್ಚಿನ ಕಾರಣದಿಂದ ಹೆಚ್ಚಿನವರು ಸೋಂಕಿನ ಬಗ್ಗೆ ಹೇಳಿಕೊಳ್ಳಲೂ ಹಿಂಜರಿಯುತ್ತಿದ್ದಾರೆ. ಈ ಸೂಕ್ಷ್ಮವನ್ನು ಮಾಧ್ಯಮಗಳು ಮತ್ತು ಸರ್ಕಾರ ಅರಿಯಬೇಕಾಗಿದೆ.
-ಡಾ. ಟಿ.ಗೋವಿಂದರಾಜು,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.