ADVERTISEMENT

ನಾಯಕರು ಮಾನ್ಯತೆ ಪಡೆಯಲು ಸಕಾಲ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:30 IST
Last Updated 21 ಏಪ್ರಿಲ್ 2021, 19:30 IST

ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಿಂದೆ ದೇಶವ್ಯಾಪಿ ಒಂದು ದಿನದ ಮುಷ್ಕರ ಹೂಡಿದರು. ಅದರಿಂದ ಯಾರ ಮೇಲೂ ಪರಿಣಾಮ ಬೀರಲಿಲ್ಲ. ಕೆಲವು ದಿನಗಳ ನಂತರ, ಅದೇ ಬ್ಯಾಂಕಿನ ಮೂರನೇ ದರ್ಜೆಯ ನೌಕರರು ಮುಷ್ಕರ ನಡೆಸಿದರು. ಆಗ ಇಡೀ ದೇಶದಲ್ಲಿ ಬ್ಯಾಂಕ್ ವ್ಯವಸ್ಥೆ ಕಲಸುಮೇಲೋಗರವಾಯಿತು. ಈಗ ಪಶ್ಚಿಮ ಬಂಗಾಳದ ಚುನಾವಣೆ ನಿಮಿತ್ತ ಪ್ರಧಾನಿಯನ್ನು ಮೊದಲ್ಗೊಂಡು ಕೇಂದ್ರ ಸರ್ಕಾರದ ಪ್ರಮುಖ ಮಂತ್ರಿಗಳು ಅಲ್ಲೇ ವಾಸ್ತವ್ಯ ಮಾಡಿ ಪ್ರಚಾರ ಭಾಷಣ ಮಾಡಿದರು. ನಮ್ಮ ರಾಜ್ಯದಲ್ಲೂ ಉಪಚುನಾವಣೆಯ ಸಂದರ್ಭದಲ್ಲಿ ಇಡೀ ರಾಜ್ಯ ಸಂಪುಟ ಹಾಗೂ ವಿರೋಧ ಪಕ್ಷದ ಹುರಿಯಾಳುಗಳು ಚುನಾವಣಾ ಕ್ಷೇತ್ರಗಳಲ್ಲಿ ವಾಸ್ತವ್ಯ ಮಾಡಿದ್ದರು. ಇದರಿಂದ ಸರ್ಕಾರದ ದೈನಂದಿನ ಆಡಳಿತಕ್ಕೆ ಅಂತಹ ಬಾಧಕವೇನೂ ಆಗಲಿಲ್ಲ. ಕಾರಣ, ಆಡಳಿತ ನಡೆಸುವವರು ಅಧಿಕಾರಿಗಳು. ಮಂತ್ರಿಗಳು ಅಲಂಕಾರಕ್ಕಾಗಿ ಮಾತ್ರ.ಈಗ, ಕೊರೊನಾ ಸೋಂಕಿನ ತೀವ್ರ ಹರಡುವಿಕೆಯಿಂದ ತಲ್ಲಣಿಸಿದ ಪ್ರಧಾನಿ ಹಾಗೂ ಕೇಂದ್ರ ಸಚಿವರು, ರಾಜ್ಯ ಸಚಿವರು ಸಭೆಗಳನ್ನು ನಡೆಸಿ, ಆಡಳಿತ ಚುರುಕಾಗುವುದರ ಬಗ್ಗೆ ವ್ಯಾಖ್ಯಾನ ಮಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಜನರಿಗೆ, ಇಡೀ ದೇಶಕ್ಕೆ ಬಿಸಿ ಮುಟ್ಟುತ್ತಿರುವುದು ಕಾರ್ಮಿಕರ ಅಭಾವದಿಂದ, ಆಡಳಿತದ ದುರ್ವ್ಯವಸ್ಥೆಯಿಂದ ಮತ್ತು ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರದಿಂದ. ಇದರ ಸಾರಾಂಶವೆಂದರೆ, ದೇಶದ ಪ್ರಗತಿಗೆ, ಸಮಾಜಕ್ಕೆ, ಜನರ ಬದುಕಿಗೆ ಬೆನ್ನೆಲುಬು ಕಾರ್ಮಿಕರು, ನೌಕರರೆಂಬುದು ಸಾಬೀತಾಗಿದೆ. ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಚುನಾವಣಾ ಭಾಷಣ ಮಾಡುವುದನ್ನು ಬಿಟ್ಟು ಜನರ ಕಷ್ಟಗಳಿಗೆ ಸ್ಪಂದಿಸುವುದಾದರೆ, ಆಡಳಿತ ವ್ಯವಸ್ಥೆ ಚುರುಕಾಗಿ ಜನರಿಗೆ ನೆಮ್ಮದಿ ಸಿಗುತ್ತದೆ. ಮುಂದಿನ ಚುನಾವಣೆ ಸಂದರ್ಭಕ್ಕೆ ಅವರು ಈಗಲೇ ಅಡಿಪಾಯ ಹಾಕಿಕೊಂಡಂತೆಯೂ ಆಗುತ್ತದೆ.

- ಕೆ.ಎನ್.ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT