ಕೊರೊನಾ ಸೋಂಕಿನ ಈ ಗಂಭೀರ ಪರಿಸ್ಥಿತಿಯಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವಿಸುತ್ತಿರುವಾಗ, ಕೋವಿಡ್ ರೋಗದ ತೀವ್ರತೆಗೆ ಕಾರಣವಾಗುವ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕಾದುದು ಸರ್ಕಾರದ ಆದ್ಯತೆಯಾಗಬೇಕು. ಅನೇಕ ರಾಜ್ಯಗಳು ಈಗಾಗಲೇ ನಿಷೇಧ ಹೇರಿವೆ. ಆದರೆ ನಿಷೇಧಿಸುತ್ತೇನೆಂದು ಹೊರಟ ನಮ್ಮ ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಿಸಿ ಹಸಿರು ಪಟಾಕಿಗೆ ನಿಶಾನೆ ತೋರಿದ್ದು ಯಾವ ಕಾರಣಕ್ಕಾಗಿ?
ಜನರ ಜೀವಕ್ಕಿಂತ ಪಟಾಕಿ ಉದ್ಯಮಿಗಳ ಹಿತ ಕಾಯುವುದು ಅಷ್ಟು ಮುಖ್ಯವೇ? ಅವರಿಗೆ ಏಳೆಂಟು ತಿಂಗಳಿನಿಂದ ಕಾಡುತ್ತಿರುವ ಈ ಪರಿಸ್ಥಿತಿಯ ಅರಿವಿದ್ದೂ ಪಟಾಕಿ ತಯಾರಿಸಬೇಕಿತ್ತೇ? ಸ್ವಲ್ಪ ಅವಕಾಶ ಕೊಟ್ಟರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿಯದೆ ಹುಚ್ಚೆದ್ದು ಕುಣಿಯುವ ಜನರೇ ಅಧಿಕವಾಗಿರುವಾಗ ಇವರನ್ನು ಸರ್ಕಾರ ಹೇಗೆ ನಿಯಂತ್ರಿಸುತ್ತದೆ? ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿರುವ ಕೊರೊನಾ ಸೋಂಕನ್ನು ಯಾವುದೇ ಬಗೆಯ ಪಟಾಕಿಯಾಗಿರಲಿ ಅದರ ಹೊಗೆ ತೀವ್ರಗೊಳಿಸುತ್ತದೆ ಎಂಬ ಅರಿವು ಸರ್ಕಾರಕ್ಕೆ ಇರಬೇಕು. ಈಗಲೂ ತಡಮಾಡದೆ ಪಟಾಕಿ ನಿಷೇಧಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಜನರ ಆರೋಗ್ಯ–ಪ್ರಾಣ ರಕ್ಷಿಸಲಿ.
–ಎನ್.ವಿ.ಅಂಬಾಮಣಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.