ADVERTISEMENT

ಕುರುಕ್ಷೇತ್ರ ಸಿನಿಮಾ | ಪದಗಳ ಉಚ್ಚಾರಣೆ ಕಡೆಗೆ ನಟರು ಇನ್ನಷ್ಟು ಗಮನ ಕೊಡಬೇಕಿತ್ತು

ಗೋಪಿನಾಥ ರಾಜ
Published 13 ಆಗಸ್ಟ್ 2019, 12:13 IST
Last Updated 13 ಆಗಸ್ಟ್ 2019, 12:13 IST
   

‘ಮುನಿರತ್ನ ಕುರುಕ್ಷೇತ್ರ’ ನೋಡಿದ ಕನ್ನಡ ಚಿತ್ರಪ್ರೇಮಿ ಗೋಪಿನಾಥ ರಾಜಅವರಮನಸ್ಸಿನಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಪೌರಾಣಿಕ ಚಿತ್ರಗಳ ನೆನಪು ತೇಲಿಬಂತು. ತಕ್ಷಣ ಮೊಬೈಲ್ ಕೈಗೆತ್ತಿಕೊಂಡ ಅವರು ಅಕ್ಷರಗಳನ್ನು ಪೋಣಿಸಿದರು.

---

ಈಚೆಗಷ್ಟೇ ನನ್ನ ಮಗ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗೆ ಕರೆದುಕೊಂಡುಹೋಗಿದ್ದ. ಅದೂ ಮಾಲ್ ಒಂದರ ಮಲಿಪ್ಲೆಕ್ಸ್‌ನಲ್ಲಿ.ಪರವಾಗಿಲ್ಲ ಕಣ್ರಿ,ಅಲ್ಲಿಗೆ ಕನ್ನಡಿಗರೂ ಬಂದಿದ್ದರು. ಆದರೆ ಮಕ್ಕಳಿಗೆ ಕನ್ನಡ ಸಿನೆಮಾ ಸಂಭಾಷಣೆಯನ್ನು ಆಂಗ್ಲಕ್ಕೆ ತರ್ಜುಮೆ ಮಾಡುತ್ತಿದ್ದರು.

ADVERTISEMENT

ಸಿನಿಮಾ ಏನೋ ಚೆನ್ನಾಗಿದೆ ಅನ್ನಿಸ್ತು. ಆದರೆ ಸಂಭಾಷಣೆ ಮತ್ತು ಚಿತ್ರ ಸಾಹಿತ್ಯ ಚಿ.ಉದಯಶಂಕರ ಅವರ ಮಟ್ಟದಲ್ಲ ಎನಿಸಿತು.ಇನ್ನು ದೊಡ್ಡದೊಡ್ಡ ಸ್ಟಾರ್‌ ನಟರ ಸಂಭಾಷಣೆಯಲ್ಲಿ ಕನ್ನಡ ಕೇಳುವುದು ಕಷ್ಟಕಷ್ಟ. ಇಂಥ ದೊಡ್ಡ ಸ್ಟಾರ್‌ಗಳಿಗೆ ಅಲ್ಪಪ್ರಾಣ, ಮಹಾಪ್ರಾಣಗಳ ನಡುವಣ ವ್ಯತ್ಯಾಸ ಗೊತ್ತಿಲ್ಲ ಎಂದರೆ ಆಶ್ಚರ್ಯವಾಗುತ್ತೆ.

‘ಒಡ್ಡೋಲಗ’ವನ್ನು ಕೆಲವರು ‘ಒಡ್ಡಲಗ’ ಎಂತಲೂ, ‘ಹೀಗೆ’ ಎನ್ನುವ ಪದವನ್ನು ‘ಈಗೆ’ ಎಂತಲೂ ಕೆಲವರು ಉಚ್ಚರಿಸಿದ್ದಾರೆ. ಅಣ್ಣಾವ್ರು,ಡಾಕ್ಟರ್ ರಾಜ್‌ಕುಮಾರ್ ಅವರಅವರ ಕಂಠದಲ್ಲಿ ಪೌರಾಣಿಕ ಸಿನಿಮಾಗಳ ಸಂಭಾಷಣೆ ಕೇಳಿದವರಿಗೆ ಇದು ಇರಿಸುಮುರಿಸು ಉಂಟುಮಾಡುವ ಸಂಗತಿ.

ಅಭಿನಯವಂತೂ ನನಗೆ ಇಷ್ಟವಾಯಿತು.ದರ್ಶನ್, ನಿಖಿಲ್ ಕುಮಾರ್, ಶ್ರೀನಿವಾಸಮೂರ್ತಿ ಮಿಂಚಿದ್ದಾರೆ. ಕರ್ಣನ ಪಾತ್ರದ ಅರ್ಜುನ್ ಸರ್ಜಾ ಅತ್ಯುತ್ತಮ ಅಭಿನಯ ಮತ್ತು ಸಂಭಾಷಣೆಯಿಂದ ಗಮನ ಸೆಳೆಯುತ್ತಾರೆ. ಭಾನುಮತಿ, ಉತ್ತರೆ ಮತ್ತು ಸುಭದ್ರೆ ಪಾತ್ರಪೋಷಣೆ ಸಾಲದು. ದ್ರೌಪದಿಯ ಪಾತ್ರ ಸಹ ಹೆಚ್ಚಿನ ಅಭಿನಯ ಬೇಡುತ್ತದೆ.

ಡಾಕ್ಟರ್ ರಾಜ್ ಕುಮಾರ್ ಅಭಿನಯದ ‘ಸತಿ ಶಕ್ತಿ’ ನೋಡಿದ್ದೆ. ಅವರ ವಿಲನ್ ಪಾರ್ಟ್ ಇನ್ನೂ ಮನದಿಂದ ಮಾಸಿಲ್ಲ. ‘ಭಕ್ತ ಪ್ರಹ್ಲಾದ’ ನೋಡಿರುವವರು ಒಮ್ಮೆ ‘ಸತಿ ಶಕ್ತಿ’ನೋಡಿದರೆ ವ್ಯತ್ಯಾಸ ಅನುಭವಿಸಬಹುದು.

‘ಮುನಿರತ್ನ ಕುರುಕ್ಷೇತ್ರ’ ನೋಡುವಾಗ ನನ್ನ ಮನಃಪಟಲದಲ್ಲಿಮಹಾಭಾರತದ ಕಥೆಯನ್ನೇ ಹೂರಣವಾಗಿ ಹೊಂದಿರುವ‘ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಶ್ರೀ ಕೃಷ್ಣ ಗಾರುಡಿ’, ‘ಮೂರೂವರೆ ವಜ್ರಗಳು’ ಸಿನಿಮಾಗಳ ದೃಶ್ಯಗಳು ತೇಲಿ ಹೋದವು. ಇಂದಿನವರಿಗೆ ಆ ಸಿನಿಮಾಗಳು ಅತ್ಯಂತ ಸರಳ ಎನ್ನಿಸಬಹುದು. ಆದರೆನಿರ್ದೇಶನದ ನಾವೀನ್ಯತೆ ಗಮನ ಸೆಳೆಯುತ್ತದೆ.

ಆ ಚಿತ್ರಗಳ ಚಿತ್ರಕತೆ,ಸಂಭಾಷಣೆ, ಭಾಷಾ ಶುದ್ಧಿ, ಗೀತಮಾಧುರ್ಯಗಳನ್ನು ಇಂದಿನ ಸಿನಿಮಾಗಳಲ್ಲಿ ಹುಡುಕಲು ಸಾಧ್ಯವೇ?ಈಗಿನ ಸಿನೆಮಾಗಳು ಗ್ರಾಫಿಕ್ಸ್‌ನಿಂದಅದ್ಭುತ ಎನ್ನಿಸಬಹುದು. ಇಂದಿನ ಸಿನೆಮಾಗಳಷ್ಟುತಾಂತ್ರಿಕ ವೈಭವ ಅಲ್ಲಿ ಇಲ್ಲ. ಆದರೆ ಪಾತ್ರವರ್ಗದ ಅಭಿನಯ, ಸಂಗೀತ, ಸಂಭಾಷಣೆ ಹೊಸತಾದ ಲೋಕವನ್ನೇ ಪ್ರೇಕ್ಷಕರ ಮುಂದೆ ತೆರೆದು ಇಡುತ್ತಿದ್ದುದು ಸುಳ್ಳಲ್ಲ.

ನನ್ನನ್ನು ಮತ್ತೊಮ್ಮೆ ಕನ್ನಡದ ಪೌರಾಣಿಕ ಚಿತ್ರಲೋಕದಲ್ಲಿ ವಿಹರಿಸುವಂತೆ ಮಾಡಿದ‘ಮುನಿರತ್ನ ಕುರುಕ್ಷೇತ್ರ’ ಚಿತ್ರತಂಡಕ್ಕೆ ನಮಸ್ಕಾರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.