ದೇಶದಲ್ಲಿ ಅಡೆತಡೆಯಿಲ್ಲದೆ ಉಲ್ಬಣವಾಗುತ್ತಿರುವ ಕೊರೊನಾ ಸೋಂಕು ಕರ್ನಾಟಕದಲ್ಲಿಯೂ ಮಿತಿಮೀರಿ ಹರಡುತ್ತಿದೆ. ಈ ಸಂಕ್ರಮಣ ಕಾಲದಲ್ಲಿ ರಾಜ್ಯ ಸರ್ಕಾರವು ಮಂಗಳವಾರ ರಾತ್ರಿಯಿಂದ ಒಂದು ವಾರ ಬೆಂಗಳೂರಿನಲ್ಲಿ ವಿಧಿಸಿರುವ ಲಾಕ್ಡೌನ್ ವ್ಯರ್ಥವಾಗದಂತೆ, ನಿರರ್ಥಕವಾಗದಂತೆ ಜನ ತಮ್ಮ ಸಾಮಾಜಿಕ ಜವಾಬ್ದಾರಿ ಅರಿತು ನಡೆಯಬೇಕಾಗಿದೆ. ಸೋಂಕು ತಡೆಯಲು ಹೆಣಗಾಡುತ್ತಿರುವ ಸರ್ಕಾರದೊಂದಿಗೆ ಕೈಜೋಡಿಸಬೇಕಾಗಿದೆ.
ಕಣ್ಣಿಗೆ ಕಾಣದ ಈ ವೈರಾಣು ಹರಡುವುದನ್ನು ತಡೆಯಲು ಸರ್ಕಾರವು ಲಾಕ್ಡೌನ್ ಅಸ್ತ್ರ ಬಳಸಿದೆ. ಅದನ್ನು ಅರ್ಥಮಾಡಿಕೊಂಡು, ತರಕಾರಿ, ಮಾಂಸ, ದಿನಸಿ ಖರೀದಿ ಎಂಬಿತ್ಯಾದಿ ಕುಂಟು ನೆಪ ಮಾಡಿಕೊಂಡು ಅನಗತ್ಯವಾಗಿ ಹೊರಗೆ ಓಡಾಡುವುದನ್ನು ನಿಲ್ಲಿಸಿ. ದೈನಂದಿನ ಜೀವನ ಆದಷ್ಟು ಬೇಗ ಪುನರಾರಂಭಗೊಳ್ಳಬೇಕು ಎಂಬ ಕನಿಷ್ಠ ಪ್ರಜ್ಞೆಯಿಂದಲಾದರೂ ಮನೆಯಲ್ಲಿಯೇ ಸುರಕ್ಷಿತವಾಗಿರಿ. ಅರಿತು ನಡೆಯಿರಿ. ಒಂದು ವಾರದಲ್ಲಿ ಕಳೆದುಕೊಳ್ಳುವಂತಹುದು ಏನೂ ಇಲ್ಲ.
ಈಗ ಜವಾಬ್ದಾರಿಯಿಂದ ನಡೆದುಕೊಂಡರಷ್ಟೇ ಮುಂದೆ ನಾವು ಸುಲಲಿತ ಜೀವನ ನಡೆಸಲು ಸಾಧ್ಯ. ಹಾಗಾಗಿ ಈ ಮಹತ್ವದ ಕಾಲಘಟ್ಟದಲ್ಲಿ ಸರ್ಕಾರದೊಂದಿಗೆ ಜನಸಾಮಾನ್ಯರು ಸಹಕರಿಸಬೇಕಾದುದು ಅತ್ಯಂತ ಮುಖ್ಯ.
-ಪ್ರೊ. ಕೆ.ಕೃಷ್ಣಮೂರ್ತಿ ಮಯ್ಯ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.