‘ಸುಲಲಿತ ವಹಿವಾಟು: ಕುಸಿದ ಕರ್ನಾಟಕ’ ವರದಿ (ಪ್ರ.ವಾ., ಸೆ. 6) ಓದಿ ವಿಷಾದವಾಯಿತು. 2018ರಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರುಈ ಶ್ರೇಯಾಂಕ ನೀಡಿಕೆಗೆ ಒರೆಗಲ್ಲಾದ ಹತ್ತು ಅಂಶಗಳ ಪೈಕಿ ಮೂರರಲ್ಲಾದರೂ ಭಾರತ ಸುಧಾರಿಸಲು ಸಾಧ್ಯ ಎಂದಿದ್ದರು. ಜಮೀನು ಹೊಂದಲು ಹಾಗೂ ಕಟ್ಟಡ ನಿರ್ಮಾಣಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಮಟ್ಟದಲ್ಲೇ ತ್ವರಿತ ಅನುಮತಿ, ಗಡಿಗಳ ಆಚೆ ವ್ಯಾಪಾರ– ವಹಿವಾಟುಗಳನ್ನು ಸುಲಲಿತಗೊಳಿಸುವುದು, ಒಪ್ಪಂದಗಳ ಪರಿಣಾಮಕಾರಿ ಜಾರಿ ಕುರಿತು ಮಾತನಾಡಿದ್ದರು.
ಹಿಂದಿನ ವರ್ಷ ಭಾರತವೇನೋ ಶ್ರೇಯಾಂಕದಲ್ಲಿ ಏರಿಕೆ ಸಾಧಿಸಿದೆ. ಆದರೆ ಕರ್ನಾಟಕ ಗಮನಾರ್ಹವಾಗಿ ಇಳಿದಿದೆ.ಈ ವರ್ಷ ಲಾಕ್ಡೌನ್ ಪರಿಣಾಮವಾಗಿ ಇನ್ನಷ್ಟು ಹಿನ್ನಡೆ ಆಗಬಹುದು. ಇಲ್ಲಿ ಈಚೆಗೆ ಮಾತೇ ಹೆಚ್ಚಾಗಿದೆ. ಉದಾಹರಣೆಗೆ ಇನ್ನೂ ಈಗಷ್ಟೆ ಹೊರಬಂದ ನೂತನ ಶಿಕ್ಷಣ ನೀತಿ ಅದೇನೋ ಕ್ರಾಂತಿಯನ್ನು ಮಾಡಿಬಿಟ್ಟಿದೆ ಎಂಬಂತೆ ಪ್ರಚಾರ ನಡೆದಿದೆ. ವಿವಿಧ ಸಂಘ–ಸಂಸ್ಥೆಗಳು ಏರ್ಪಡಿಸುವ ಸಮಾರಂಭಗಳಿಗೆ ಸಚಿವರು ಹೋಗಿ ಮನವಿ ಪತ್ರ ಸ್ವೀಕರಿಸಿ, ಕೆಲವು ಆಶ್ವಾಸನೆಗಳನ್ನೂ ಕೊಟ್ಟು ಬರುತ್ತಾರೆ. ಆದರೆ ಸಮಸ್ಯೆಗಳು ಬಹುಪಾಲು ಹಾಗೇ ಉಳಿಯುತ್ತವೆ. ಈ ಬಿಗುವಿನ ಕಾಲದಲ್ಲೂ ಉದ್ಘಾಟನಾ ಸಮಾರಂಭಗಳಿಗೆ ಹಣ ಪೋಲಾಗುತ್ತಿದೆ. ಕುಸಿತ ನಿಯಂತ್ರಿಸಲು ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ.
-ಎಚ್.ಎಸ್.ಮಂಜುನಾಥ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.